ಸಿದ್ಧಾರ್ಥನಗರ(ಉತ್ತರ ಪ್ರದೇಶ): ಹಿಂದಿನ ಸರ್ಕಾರಗಳು ಪೂರ್ವಾಂಚಲ್ ಪ್ರದೇಶದ ಜನರ ಮೂಲಭೂತ ವೈದ್ಯಕೀಯ ಅಗತ್ಯತೆಗಳನ್ನು ಕಡೆಗಣಿಸಿ ಅವರ ಕುಟುಂಬಗಳ ‘ಖಜಾನೆ ತುಂಬು’ವತ್ತ ಗಮನ ಹರಿಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಈ ಪ್ರದೇಶವು ವೈದ್ಯಕೀಯ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ವರ್ಚುವಲ್ ಆಗಿಉದ್ಘಾಟಿಸಿದ ಪ್ರಧಾನಿ, ಬಡವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಬಿಜೆಪಿಯ ಆದ್ಯತೆಯಾಗಿದೆ ಎಂದು ಹೇಳಿದರು.
2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಅವರ ಭ್ರಷ್ಟಾಚಾರದ ಚಕ್ರ 24 ಗಂಟೆಗಳ ಕಾಲ ನಡೆಯಿತು. ತಮ್ಮ ಸ್ವಂತ ದುಡಿಮೆ ಮತ್ತು ತಮ್ಮ ಕುಟುಂಬದ ಬೊಕ್ಕಸವನ್ನು ತುಂಬುವುದಕ್ಕೆ ಆದ್ಯತೆಯನ್ನು ನೀಡಿದ್ದರು. ಬಡವರಿಗೆ ಮೂಲ ಸೌಕರ್ಯಗಳನ್ನು ವಿಸ್ತರಿಸುವುದು ನಮ್ಮ ಆದ್ಯತೆಯಾಗಿದೆ’ ಎಂದು ಮೋದಿ ಹೇಳಿದರು.
ಈ ಮೊದಲು ಔಷಧಗಳು, ಆಂಬ್ಯುಲೆನ್ಸ್, ನೇಮಕಾತಿಗಳು, ವರ್ಗಾವಣೆ ಮತ್ತು ಪೋಸ್ಟಿಂಗ್ನಲ್ಲಿ ಭ್ರಷ್ಟಾಚಾರವಿತ್ತು. ಈ ಮೂಲಕ ಉತ್ತರ ಪ್ರದೇಶದಲ್ಲಿ ಕೆಲವು 'ಪರಿವಾರ'ಗಳು ಪ್ರವರ್ಧಮಾನಕ್ಕೆ ಬಂದವು ಎಂದು ಅವರು ಹೇಳಿದರು.
‘ಅವರ ಭ್ರಷ್ಟಾಚಾರದ ಚಕ್ರವು 24 ಗಂಟೆಗಳ ಕಾಲ ನಡೆಯಿತು. ಆದರೆ, ಪೂರ್ವಾಂಚಲ್ ಮತ್ತು ಉತ್ತರ ಪ್ರದೇಶದ ಸಾಮಾನ್ಯ ಜನರು ಸೊರಗಿದರು’ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಮೊದಲು ಮತ್ತು ನಂತರ ಮೂಲಭೂತ ಆರೋಗ್ಯ ಸೌಕರ್ಯಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಲಿಲ್ಲ. ಪಟ್ಟಣಗಳು ಮತ್ತು ಹಳ್ಳಿಗಳ ಜನರು ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ನಗರಗಳಿಗೆ ಧಾವಿಸಬೇಕಾಯಿತು. ಈ ಪ್ರದೇಶದಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ತು ಎಂದು ಅವರು ಹೇಳಿದರು.