ನವದೆಹಲಿ: ಬಸವಣ್ಣನವರ ಅನುಭವ ಮಂಟಪವು ಸಹ ಒಂದು ಸ್ವರೂಪದ ಪ್ರಜಾಪ್ರಭುತ್ವ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ನೂತನ ಸಂಸತ್ ಭವನದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋದಿ ಅವರು ಈ ಮಾತು ಹೇಳಿದ್ದಾರೆ.
ಬ್ರಿಟನ್ನ ಜನರಿಗೆ ನಾಗರಿಕ ಹಕ್ಕುಗಳನ್ನು ನೀಡುವ ಮ್ಯಾಗ್ನಾ ಕಾರ್ಟಾವನ್ನು 1215ರಲ್ಲಿ ಜಾರಿ ಮಾಡಲಾಗಿತ್ತು. ಆದರೆ ಬಸವಣ್ಣನವರು ಅದಕ್ಕೂ ಮುನ್ನವೇ ಪ್ರಜಾಸತ್ತಾತ್ಮಕವಾದ ಅನುಭವ ಮಂಟಪವನ್ನು ಸ್ಥಾಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.
‘ಜನರ ಕಲ್ಯಾಣ ಮತ್ತು ದೇಶದ ಕಲ್ಯಾಣಕ್ಕಾಗಿ ಅನುಭವ ಮಂಟಪವು ಕೊಡುಗೆ ನೀಡಿದೆ. ಅನುಭವ ಮಂಟಪವು ಎಲ್ಲರಿಗೂ ಸ್ಫೂರ್ತಿದಾಯಕವಾದುದು. ಇದೂ ಒಂದು ಸ್ವರೂಪದ ಪ್ರಜಾಪ್ರಭುತ್ವ’ ಎಂದೂ ಅವರು ಹೇಳಿದ್ದಾರೆ.