ಗಾಂಧಿನಗರ:ಸ್ವಾತಂತ್ರ್ಯ ನಂತರ ದೇಶದಲ್ಲಿ ಭದ್ರತೆ, ರಕ್ಷಣಾ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಕಾರ್ಯಗಳು ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈಗಲೂ ಸಾಮಾನ್ಯ ಜನರಲ್ಲಿ ಪೊಲೀಸರಿಂದ ದೂರ ಇದ್ದರೆ ಸಾಕು ಎಂಬ ಮನೋಭಾವವಿದೆ. ಇಂಥ ಸ್ಥಿತಿಯನ್ನು ಬದಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಅವರು, ರಾಷ್ಟ್ರೀಯ ಶಿಕ್ಷಾ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭದ್ರತೆ ಕಾರ್ಯದಲ್ಲಿ ನಿಯೋಜಿತರಾಗಿರುವ ಸಿಬ್ಬಂದಿಗೂ ಸಮಗ್ರವಾಗಿ ತರಬೇತಿ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ತಾವು ವಿಶ್ವವಿದ್ಯಾಲಯಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರುವುದಾಗಿ ಹೇಳಿದರು.
ಎರಡನೇ ದಿನವೂ ರೋಡ್ ಷೋ
ಗುಜರಾತ್ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರವೂ ರೋಡ್ ಷೋ ನಡೆಸಿದರು. ದೇಹ್ಗಂ ಪಟ್ಟಣದಿಂದ ಲಾವಡ್ ಗ್ರಾಮದಲ್ಲಿನ ರಾಷ್ಟ್ರೀಯ ರಕ್ಷಾ ವಿ.ವಿವರೆಗೂ ರ್ಯಾಲಿ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಕೈಬೀಸಿ ‘ವಿಜಯದ ಸಂಕೇತ’ ತೋರಿದರು.
ರೋಡ್ ಷೋ ಸುಮಾರು 12 ಕಿ.ಮೀ. ಉದ್ದಕ್ಕೂ ನಡೆದಿದ್ದು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಧಾನಿ ಜೊತೆಗೆ ತೆರೆದ ಜೀಪಿನಲ್ಲಿದ್ದರು. ಜನರು ಅಲ್ಲಲ್ಲಿ ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡಿ ಮುಖಂಡರನ್ನು ಬರಮಾಡಿಕೊಂಡರು.
ಪ್ರಧಾನಿ ಮೋದಿ ಶುಕ್ರವಾರವೂ ಅಹಮದಾಬಾದ್ ವಿಮಾನನಿಲ್ದಾಣದಿಂದ, ಪಕ್ಷದ ಕಚೇರಿಯಾಗಿರುವ ‘ಕಮಲಂ’ವರೆಗೂ ರೋಡ್ ಷೋ ನಡೆಸಿದ್ದರು. ಈ ರೋಡ್ ಷೋ ಮೂಲಕ ಅವರು ಗುಜರಾತ್ ವಿಧಾನಸಭೆ ಚುನಾವಣಾ ಸಿದ್ಧತೆಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.
ರೋಡ್ ಷೋ ಹೊರತಾಗಿ ಪ್ರಧಾನಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಖೇಲ್ ಮಹಾಕುಂಭ್ ಹೆಸರಿನ ಕ್ರೀಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಸಾಧನೆ ಮಾಡಿದ ಬೆನ್ನಲ್ಲೇ ಪ್ರಧಾನಿ ಅವರ ಈ ಭೇಟಿ ಗಮನಸೆಳೆದಿದೆ.ಡಿಸೆಂಬರ್ ತಿಂಗಳಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುವ ಸಂಭವವಿದೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.