ಹೈದರಾಬಾದ್: ‘ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್’ ಸಂಸ್ಥೆಯ 20ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೈದರಾಬಾದ್ ಪ್ರವಾಸ ಕೈಗೊಳ್ಳಲಿದ್ದಾರೆ.
ದೇಶದಾದ್ಯಂತ ಪರ್ಯಾಯ ಕೂಟ ರಚನೆಗಾಗಿ ಪರ್ಯಾಯ ರಾಜಕೀಯ ನಾಯಕರ ಜೊತೆ ಸಭೆ ನಡೆಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಗುರುವಾರ ಜೆಡಿಎಸ್ನ ವರಿಷ್ಠ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಭೇಟಿಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಹೀಗಾಗಿ,ಕೆಸಿಆರ್ ಅವರು ಈ ಬಾರಿ ಸಹ ಮೋದಿ ಅವರನ್ನು ಬರ ಮಾಡಿಕೊಳ್ಳಲು ಹೋಗದಿರುವ ಸಾಧ್ಯತೆಯಿದೆ. ಹೀಗಾದಲ್ಲಿ, 4 ತಿಂಗಳ ಅವಧಿಯೊಳಗೆ ಮೋದಿ ಅವರ ಸ್ವಾಗತಕ್ಕೆ ಹೋಗದೆ ತಪ್ಪಿಸಿಕೊಂಡಂತಾಗಲಿದೆ.
ಫೆಬ್ರುವರಿ 5ರಂದು ಹೈದರಾಬಾದ್ ಬಳಿ ನಿರ್ಮಾಣವಾಗಿರುವ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಮೋದಿ ಅವರು ಬಂದಿದ್ದರು. ಈ ವೇಳೆ ಜ್ವರದ ನೆಪ ಹೇಳಿದ್ದಕೆಸಿಆರ್ ಅವರು ಮೋದಿ ಭೇಟಿಯಿಂದ ತಪ್ಪಿಸಿಕೊಂಡಿದ್ದರು.
ತೆಲಂಗಾಣವನ್ನು ತಾರತಮ್ಯದಿಂದ ಕಾಣಲಾಗುತ್ತಿದೆ ಎಂದು ಆರೋಪಿಸಿ ಕೆಸಿಆರ್ ಮತ್ತು ಅವರ ಪಕ್ಷದ ನಾಯಕರುಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ಟೀಕಿಸುತ್ತಲೇ ಇದ್ದಾರೆ.