ನವದೆಹಲಿ: ಭಾರತವು ಕ್ರೀಡಾಕ್ಷೇತ್ರದ ಸುವರ್ಣಯುಗದ ಸನಿಹದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ದೇಶದ ಅಥ್ಲೀಟ್ಗಳಿಗೆ ಶನಿವಾರ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 61 ಪದಕಗಳನ್ನು ಜಯಿಸಿತ್ತು. ಅದರಲ್ಲಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳಿದ್ದವು.
‘ಕೇವಲ ಪದಕ ಗಳಿಕೆಯ ಆಧಾರದ ಮೇಲೆ ಅಥ್ಲೀಟ್ಗಳ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ನಮ್ಮ ಕ್ರೀಡಾಪಟುಗಳು ತೀವ್ರ ಪೈಪೋಟಿ ನಡೆಸಿದರು. ಒಂದು ಸೆಕೆಂಡ್ ಅಥವಾ ಒಂದು ಸೆಂಟಿಮೀಟರ್ ವ್ಯತ್ಯಾಸ ಆಗಿರಬಹುದು. ಅವರ ಪ್ರದರ್ಶನಮಟ್ಟದಲ್ಲಿ ಇನ್ನಷ್ಟು ಸುಧಾರಣೆ ಕಂಡುಬರುವ ವಿಶ್ವಾಸ ನನಗಿದೆ‘ ಎಂದು ಮೋದಿ ಹೇಳಿದ್ದಾರೆ.
‘ಇದು ಆರಂಭ ಮಾತ್ರ. ನಾವು ಸುಮ್ಮನೆ ಕೂರುವುದಿಲ್ಲ. ಭಾರತ ಕ್ರೀಡಾಕ್ಷೇತ್ರದ ಸುವರ್ಣಯುಗವು ಬಾಗಿಲು ಬಡಿಯುತ್ತಿದೆ. ಜಗತ್ತಿನ ಶ್ರೇಷ್ಠ ಕ್ರೀಡಾವ್ಯವಸ್ಥೆ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾವ ಪ್ರತಿಭೆಗಳೂ ಹೊರಗುಳಿಯಬಾರದು‘ ಎಂದು ಮೋದಿ ನುಡಿದರು.
ಕಾಮನ್ವೆಲ್ತ್ ಕೂಟದ ಭಾರತ, ಬ್ಯಾಡ್ಮಿಂಟನ್, ಕುಸ್ತಿ ಮತ್ತು ವೇಟ್ಲಿಫ್ಟಿಂಗ್ನಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು.ಅಥ್ಲೆಟಿಕ್ಸ್, ಜೂಡೊ ಮತ್ತು ಲಾನ್ಬಾಲ್ಸ್ಗಳಲ್ಲೂ ಪದಕಗಳು ಬಂದಿದ್ದವು.
ಈ ಕುರಿತು ಮಾತನಾಡಿದ ಮೋದಿ ‘ಈ ಬಾರಿ ಹೊಸ ಕ್ರೀಡೆಗಳಲ್ಲೂ ನಾವು ಪದಕ ಜಯಿಸಿದೆವು. ಈ ರೀತಿಯ ಪ್ರದರ್ಶನವು ಹೊಸ ಕ್ರೀಡೆಗಳಲ್ಲಿ ಯುವಜನರ ಆಸಕ್ತಿಯನ್ನು ಹೆಚ್ಚಿಸಲಿದೆ‘ ಎಂದರು.
ಕೂಟದಲ್ಲಿ ಬೆಳ್ಳಿ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡವನ್ನೂ ಮೋದಿ ಶ್ಲಾಘಿಸಿದರು.
ಕ್ರೀಡಾಕೂಟದಕ್ಕೆ ತೆರಳಿದ್ದ ಬಹುತೇಕ ಅಥ್ಲೀಟ್ಗಳುಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನಲ್ಲಿ ಭಾಗವಹಿಸಿದ್ದ ಆಟಗಾರರನ್ನು ಮೋದಿ ಇದೇ ವೇಳೆ ಅಭಿನಂದಿಸಿದರು.