ನವದೆಹಲಿ: ಕಾನೂನಿನ ನೆರವಿನ ಕೊರತೆಯಿಂದಾಗಿ ಹಲವಾರು ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಉಳಿಯುವಂತಾಗಿದೆ ಎಂದು ಹೇಳಿರುವಪ್ರಧಾನಮಂತ್ರಿ ನರೇಂದ್ರ ಮೋದಿ, ಸುಗಮವ್ಯವಹಾರಕ್ಕೆ ಅನುವು ಮಾಡಿಕೊಡುವಂತೆಯೇ, ಸುಲಭವಾಗಿ ನ್ಯಾಯ ದೊರೆಯುವಂತೆ ಮಾಡುವುದೂ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ಕಾನೂನಿನ ನೆರವಿನ ಕೊರತೆಯಿಂದಾಗಿ ಹಲವಾರು ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಉಳಿಯುವಂತಾಗಿದೆ
ಅಖಿಲ ಭಾರತ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಇತರ ಹಿರಿಯ ನ್ಯಾಯಮೂರ್ತಿಗಳು ಹಾಗೂ ಕಾನೂನು ಸಚಿವ ಕಿರಣ್ ರಿಜಿಜು ಅವರೊಂದಿಗೆ ಶನಿವಾರ ವೇದಿಕೆ ಹಂಚಿಕೊಂಡರು.
ನ್ಯಾಯ ಸ್ಥಾಪನೆ ದೇಶಕ್ಕೆ ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ ಮೋದಿ, ಸಮಾಜಕ್ಕೆ ನ್ಯಾಯ ವಿತರಣೆಯೂ ಅತ್ಯಂತ ಅಗತ್ಯ. ವಿಚಾರಣಾಧೀನ ಕೈದಿಗಳ ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುವಂತೆ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರವನ್ನು ಒತ್ತಾಯಿಸಿದರು.
'ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುವ ಸಮಯವಾಗಿದೆ. ವ್ಯವಹಾರವನ್ನು ಸುಗಮಗೊಳಿಸುವಂತೆ ಮತ್ತು ಸುಲಭ ಜೀವನ ಸಾಧ್ಯವಾಗುವಂತೆ ಮಾಡುವಂತೆಯೇ,ದೇಶದ ಈ ಅಮೃತ ಯಾತ್ರೆಯಲ್ಲಿ ಸರಳವಾಗಿ ನ್ಯಾಯ ಸಿಗುವಂತೆ ಮಾಡುವುದೂ ಮುಖ್ಯವಾಗಿದೆ' ಎಂದು ತಿಳಿಸಿದ್ದಾರೆ.