ನವದೆಹಲಿ: ಮುಂಬರುವ ಚುನಾವಣೆಗಳಲ್ಲಿ ಎದುರಾಗಬಹುದಾದ ‘ಸೋಲಿನ ಭಯ’ದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ’ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ‘ಈ ಕೃಷಿ ಕಾಯ್ದೆಗಳಿಂದ ರೈತರಿಗೆ ಭಾರಿ ನೋವು ಉಂಟಾಗಿದ್ದು, ಪ್ರಧಾನಿ ರೈತರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡಲು, ರೈತರ ಆದಾಯ ದ್ವಿಗುಣ ಮಾಡಲು ಹಾಗೂ ಅವರನ್ನು ಸಾಲ ಮುಕ್ತರಾಗಿಸಲು ಯಾವ ಮಾರ್ಗಗಳನ್ನು ಅನುಸರಿಸುತ್ತಿದ್ದೀರಿ’ ಎಂದು ಅವರು ಕೇಳಿದರು.
ಬಿಜೆಪಿಯಲ್ಲಿರುವ ‘ರೈತ ವಿರೋಧಿ’ ಮತ್ತು ಬಂಡವಾಳಶಾಹಿ ಸ್ನೇಹ ಶಕ್ತಿಗಳುಅಂತಿಮವಾಗಿ ಸೋತಿವೆ. ಇಂದು ಮೋದಿಯ ಅಹಂಕಾರದ ಸೋಲಿನ ದಿನವಾಗಿದೆ ಎಂದು ಅವರು ಹೇಳಿದರು.
‘ಬಿಜೆಪಿ ಮತ್ತು ಪ್ರಧಾನಿ ಅವರಲ್ಲಿದ್ದ ದುರಹಂಕಾರದಿಂದಾಗಿ ಅವರು ರೈತರ ಎದುರು ತಲೆಬಾಗಬೇಕಾಯಿತು. ಆದರೆ, ಅವರು ಮಾಡಿರುವ ದುಷ್ಕೃತ್ಯವನ್ನು ದೇಶ ಮರೆಯುವುದಿಲ್ಲ’ ಎಂದರು.