ನವದೆಹಲಿ: ಸ್ವಾತಂತ್ರ್ಯ ನಂತರ ದೆಹಲಿಯ ಕೆಲವು ಕುಂಟುಬಗಳಿಗೆ ಮಾತ್ರ ಹೊಸ ನಿರ್ಮಾಣವು ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಆದರೆ ಬಿಜೆಪಿ ಸರ್ಕಾರವು ಈ ಸಂಕುಚಿತ ಮನೋಭಾವದಿಂದ ದೇಶವನ್ನು ಹೊರತಂದಿದ್ದು, ರಾಷ್ಟ್ರೀಯ ಪ್ರಾಮುಖ್ಯತೆಯ ಹೊಸ ಸ್ಮಾರಕಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದ್ದಾರೆ.
ಗುಜರಾತ್ನ ಗಿರ್ ಸೋಮನಾಥ ಜಿಲ್ಲೆಯ ಪ್ರಸಿದ್ಧ ಸೋಮನಾಥ ದೇವಸ್ಥಾನದ ಬಳಿ ನಿರ್ಮಿಸಲಾದ ಅತಿಥಿ ಗೃಹ ವರ್ಚುಲ್ ಆಗಿ ಉದ್ಘಾಟಿಸಿ ಮಾತನಾಡಿದ ಮೋದಿ, ನಮ್ಮ ಪೂರ್ವಜರು ನಮಗಾಗಿ ಅನೇಕ ವಿಷಯಗಳನ್ನು ಬಿಟ್ಟು ಹೋಗಿದ್ದಾರೆ. ಆದರೆ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದರು ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ದೆಹಲಿಯ ಕೆಲವು ಕುಟುಂಬಗಳಿಗೆ ಮಾತ್ರ ನಿರ್ಮಾಣ ಕಾರ್ಯ ನಡೆಯಿತು. ನಾವು ಈ ಸಂಕುಚಿತ ಮನೋಭಾವದಿಂದ ದೇಶವನ್ನು ಹೊರತಂದಿದ್ದೇವೆ. ಹೊಸ ರಾಷ್ಟ್ರೀಯ ಸ್ಮಾರಕಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಅಸ್ತಿತ್ವದಲ್ಲಿರುವ ಸ್ಮಾರಕಗಳನ್ನು ಮತ್ತಷ್ಟು ವೈಭವಗೊಳಿಸುತ್ತಿದ್ದೇವೆ ಎಂದು ಹೇಳಿದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಸ್ವಚ್ಛತೆ, ಸೌಲಭ್ಯ, ಪ್ರವಾಸಿಗರ ಸಮಯದ ಗೌರವ ಮತ್ತು ಆಧುನಿಕ ಮನಸ್ಥಿತಿ ಎಂಬ ವಿಷಯಗಳ ಅಗತ್ಯವಿದೆ. ಧಾರ್ಮಿಕ ಹಾಗೂ ಪಾರಂಪರಿಕ ಸ್ಥಳಗಳ ಅಭಿವೃದ್ಧಿಯು ಅವು ನೆಲೆಗೊಂಡಿರುವ ಪ್ರದೇಶಗಳ ಆರ್ಥಿಕತೆಗೆ ಉತ್ತೇಜನ ನೀಡಲಿವೆ ಎಂದು ಮೋದಿ ಪ್ರತಿಪಾದಿಸಿದರು.