ಔರಂಗಾಬಾದ್: ಬಿಜೆಪಿ ವಿರುದ್ಧ ರಚಿಸುವ ಯಾವುದೇ ರಾಜಕೀಯ ಕೂಟ ಯಶಸ್ವಿಯಾಗಲು ಮುಸ್ಲಿಮರ ಬೆಂಬಲ ಬೇಕೇಬೇಕು ಎಂದು ಎಐಎಂಐಎಂನ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಬುಧವಾರ ಹೇಳಿದ್ದಾರೆ.
ಈ ಹೇಳಿಕೆ ಮೂಲಕ ಅವರು ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿರುವ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಕುಟುಕಿದ್ದಾರೆ.
‘ದೇಶದ ಮುಸ್ಲಿಮರು ಈಗ ಆಲ್ ಇಂಡಿಯಾ ಮಜ್ಲಿಸ್–ಎ–ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದೊಂದಿಗೆ ಇದ್ದಾರೆ. ಮುಸ್ಲಿಮರು ಎನ್ಸಿಪಿ ಬೆಂಬಲಿಸುತ್ತಾರೆ ಎಂದು ಶರದ್ ಪವಾರ್ ಭಾವಿಸಿದ್ದರೆ ಅವರು ಔರಂಗಾಬಾದ್ಗೆ ಭೇಟಿ ನೀಡಿ ವಾಸ್ತವ ಅರಿಯಬೇಕು’ ಎಂದರು.
‘ಮುಂದಿನ ವರ್ಷ ಉತ್ತರ ಪ್ರದೇಶ ಹಾಗೂ ದೆಹಲಿ ವಿಧಾನಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ’ ಎಂದೂ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಿಂದ ಇದು ಮನದಟ್ಟಾಗಿದೆ. ಮುಸ್ಲಿಮರ ಪರ ಕೇಜ್ರಿವಾಲ್ ಧ್ವನಿ ಎತ್ತುವರು ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದರು.