ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌, ಪಿಎನ್‌ಜಿ ಚಿತಾಗಾರ ಬಳಕೆ ಪರಿಶೀಲನೆಗೆ ಸೂಚನೆ

ಶವ ದಹನ: ಪರಿಸರಸ್ನೇಹಿ ವಿಧಾನಕ್ಕೆ ಎನ್‌ಜಿಟಿ ನಿರ್ದೇಶನ
Last Updated 17 ಏಪ್ರಿಲ್ 2022, 11:15 IST
ಅಕ್ಷರ ಗಾತ್ರ

ನವದೆಹಲಿ: ಶವಗಳನ್ನು ಸುಡಲು ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ಶವಗಳನ್ನು ಸುಡಲು ಕಟ್ಟಿಗೆ ಬಳಸುತ್ತಿರುವುದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಹೀಗಾಗಿ, ಈ ಕಾರ್ಯಕ್ಕೆ ವಿದ್ಯುತ್‌ ಅಥವಾ ಪಿಎನ್‌ಜಿ ಚಿತಾಗಾರಗಳನ್ನು ಬಳಕೆ ಕಾರ್ಯಸಾಧುವೇ ಎಂಬುದನ್ನು ಪರಿಶೀಲಿಸುವಂತೆ ಎನ್‌ಜಿಟಿ ಚೇರಮನ್ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್ ನೇತೃತ್ವದ ನ್ಯಾಯಪೀಠ ಸೂಚಿಸಿತು.

ನ್ಯಾಯಮೂರ್ತಿಗಳಾದ ಸುಧೀರ್‌ ಅಗರವಾಲ್ ಹಾಗೂ ಅರುಣಕುಮಾರ್‌ ತ್ಯಾಗಿ ಈ ಪೀಠದಲ್ಲಿದ್ದಾರೆ.

‘ಬೆಂಕಿಯನ್ನು ಬಳಸಿ ಶವಸಂಸ್ಕಾರ ನಡೆಸುವುದಕ್ಕೆ ಧಾರ್ಮಿಕವಾಗಿ ಹೆಚ್ಚು ಮಹತ್ವ ಇದೆ. ಆದರೆ, ಬಯಲಲ್ಲಿ ನಡೆಸುವ ಒಂದು ಶವದ ದಹನಕ್ಕೆ 350–400 ಕೆ.ಜಿಯಷ್ಟು ಕಟ್ಟಿಗೆ ಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಶವಸಂಸ್ಕಾರಕ್ಕೆ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಎಂಬ ನಮ್ಮ ಸಲಹೆಯ ಹಿಂದೆ ಯಾವುದೇ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಉದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದ ಪೀಠ, ‘ಈಗ ರೂಢಿಯಲ್ಲಿರುವ ವಿಧಾನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು, ಪರಿಸರಸ್ನೇಹಿ ವಿಧಾನಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು.

ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ಸ್ಮಶಾನದಲ್ಲಿ ನಡೆಯುವ ಶವಗಳ ದಹನದಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಿರ್ದೇಶನ ನೀಡುವಂತೆ ಕೋರಿ ರಿಯಲ್‌ ಆ್ಯಂಕರ್ಸ್‌ ಡೆವಲೆಪರ್ಸ್ ಪ್ರೈ. ಲಿಮಿಟೆಡ್ ಎಂಬ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT