ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80:20... ಪೆರೆಟೊ ಸೂತ್ರದ ಬೆನ್ಹತ್ತಿ!

ಪೆರೆಟೊ ಸೂತ್ರದ ಬೆನ್ಹತ್ತಿ...
Last Updated 10 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಶೇ 20ರಷ್ಟು ಕ್ರಿಮಿನಲ್‌ಗಳಿಂದ ಶೇ 80ರಷ್ಟು ಅಪರಾಧ ಪ್ರಕರಣಗಳು l ಶೇ 20ರಷ್ಟು ಚಾಲಕರಿಂದ
ಶೇ 80ರಷ್ಟು ಅಪಘಾತಗಳು l ಕೇವಲ ಶೇ 20ರಷ್ಟು ಉದ್ಯೋಗಿಗಳಿಂದ ಸಂಸ್ಥೆಯ ಶೇ 80ರಷ್ಟು ಕೆಲಸ
l ಶೇ 20ರಷ್ಟು ಬಗ್‌ಗಳಿಂದ ಶೇ 80ರಷ್ಟು ಸಾಫ್ಟ್‌ವೇರ್‌ ಸಮಸ್ಯೆ ಸೃಷ್ಟಿ l ಶೇ 80ರಷ್ಟು ಹುಡುಕಾಟಗಳಿಗೆ
ಶೇ 20ರಷ್ಟು ಕೀ ವರ್ಡ್‌ಗಳು ಬಳಕೆ l ಶೇ 80ರಷ್ಟು ಸಂಪತ್ತು ಬರೀ ಶೇ 20ರಷ್ಟು ಜನರ ಬಳಿ

***

80=20! ಅರೆರೆ, ಇದೆಂತಹ ಸೋಜಿಗದ ಸಮೀಕರಣ! ಎಂಬತ್ತಕ್ಕೆ ಹೆಂಗಪ್ಪ ಇಪ್ಪತ್ತು ಸಮನಾಗುವುದು? ಈ ಸಮೀಕರಣ ನನ್ನನ್ನು ಬೆರಗುಗೊಳಿಸಿದ ಹಾಗೆ ನ್ಯೂಟನ್‌ನ ಚಲನೆಯ ನಿಯಮವಾಗಲಿ, ಐನ್‌ಸ್ಟೀನ್‌ನ ಸಾಪೇಕ್ಷ ಸಿದ್ಧಾಂತವಾಗಲಿ ನನ್ನ ಹುಬ್ಬು ಮೇಲೇರಿಸುವಂತೆ ಮಾಡಿಲ್ಲ ನೋಡಿ. ನೀವು ಯಾವುದೇ ವಿಷಯ ತಗೊಳ್ಳಿ. ಈ 80:20ರ ಸಮೀಕರಣ ಧುತ್ತಂತ ಮೂಗು ತೂರಿಸುತ್ತದೆ. ಅಷ್ಟೊಂದು ಪ್ರಭಾವಿ ಇದು. ಈ ಸಮೀಕರಣ ಇಡೀ ಜಗತ್ತನ್ನೇ ವ್ಯಾಪಿಸಿ ನಿಂತಿರುವುದರ ಅರಿವು ನಿಮಗೂ ಆದೀತು. ಈ ಸೂತ್ರವನ್ನು ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮಾತ್ರವಲ್ಲ, ವ್ಯಕ್ತಿಯ ವೈಯಕ್ತಿಕ ಪ್ರಗತಿಗೂ ಕೀಲೆಣ್ಣೆಯಾಗಿ ಮಾಡಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೆ?

ದೊಡ್ಡ ದೊಡ್ಡ ಕಂಪನಿಗಳ ಚಿಂತಕರ ಚಾವಡಿಯಲ್ಲಿ ಈ ಸೂತ್ರದಿಂದಲೇ ಹೊಸ ಹೊಸ ಮಾರುಕಟ್ಟೆ ತಂತ್ರ ಹೆಣೆಯುತ್ತಾರೆ. ಮಾನವ ಸಂಪನ್ಮೂಲದ ಮರುನಿಯೋಜನೆ ಮಾಡಲೂ ಈ ಸೂತ್ರ ನೆರವಿಗೆ ಬರುತ್ತದೆ. ಸರ್ಕಾರಗಳು ತೆರಿಗೆ ಲೆಕ್ಕಾಚಾರಕ್ಕೆ ಈ ಸಮೀಕರಣವನ್ನೇ ಆಧಾರವನ್ನಾಗಿ ಮಾಡಿಕೊಳ್ಳುವ ಪರಿಪಾಟ ಉಂಟು. ಹಾಗಾದರೆ 80:20ರ ಸಮೀಕರಣದ ಹಿಂದಿರುವ ಮಜಕೂರಾದರೂ ಏನು? ಮತ್ತೆ ಇದಕ್ಕೆ ಪೆರೆಟೊ ಸಿದ್ಧಾಂತವೆಂದು ಕರೆಯುವುದಾದರೂ ಏಕೆ?

ಇಟಲಿ ದೇಶದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ವಿಲ್‌ಫ್ರೆಡ್ ಪೆರೆಟೊ. ಈತ ರೂಪಿಸಿಕೊಟ್ಟ ಆರ್ಥಿಕ ನೀತಿಗಳು ಆಗಿನ ಇಟಲಿ ಸರ್ಕಾರಕ್ಕೂ ಜನಸಮುದಾಯಕ್ಕೂ ಕ್ಷೇಮಕರವಾಗಿದ್ದವು. ಎಲ್ಲರೂ ಯಾವುದೇ ಪ್ರಯಾಸವಿಲ್ಲದೇ ತಮ್ಮ ಪಾಲಿನ ತೆರಿಗೆಗಳನ್ನು ಸಂದಾಯ ಮಾಡುತ್ತಿದ್ದರು. ಸರ್ಕಾರವೂ ಖಜಾನೆಯನ್ನು ಭರ್ತಿ ಮಾಡಿಕೊಂಡು ತನ್ನ ಹೊಣೆಗಾರಿಕೆಯನ್ನು, ಅಭಿವೃದ್ಧಿ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೊರಟಿತ್ತು.

ಅದೇ ಸಮಯದಲ್ಲಿ, ಪಕ್ಕದ ಇಂಗ್ಲೆಂಡ್‌ನಲ್ಲಿ ಭಾರಿ ಆರ್ಥಿಕ ಸಂಕಷ್ಟ ತಲೆದೋರಿತ್ತು. ಬೊಕ್ಕಸದಲ್ಲಿ ಸಾಕಷ್ಟು ಧನಸಂಗ್ರಹವಿಲ್ಲದೆ, ಸಾರ್ವಜನಿಕರ ಮೇಲೆ ಮತ್ತಷ್ಟು ಕರಭಾರ ಹೇರಲೂ ಸಾಧ್ಯವಾಗದೆ ಬ್ರಿಟಿಷ್ ಪ್ರಭುತ್ವ ಸಂದಿಗ್ಧ ಸ್ಥಿತಿಯಲ್ಲಿತ್ತು. ಹೀಗಾದರೆ ಮುಂದೆ ಗತಿಯೇನು ಎಂಬ ಮಿಲಿಯನ್‌ ಪೌಂಡ್‌ ಪ್ರಶ್ನೆ ಅದರ ಮುಂದೆ ಭೂತಾಕಾರವಾಗಿ ನಿಂತಿತ್ತು.

ಆಗ ಬ್ರಿಟಿಷ್ ದೇಶದ ಆರ್ಥಿಕ ವಿಶ್ಲೇಷಕರು ಇಟಲಿಯ ಅಭ್ಯುದಯವನ್ನು ನೋಡಿ ಪೆರೆಟೊ ಅವರನ್ನು ಇಂಗ್ಲೆಂಡ್‌ಗೆ ಕರೆಸಿ ಅವರ ಅಭಿಪ್ರಾಯವನ್ನೂ ಕೇಳುವಂತೆ ಆಗಿನ ಮಹಾರಾಣಿ ವಿಕ್ಟೋರಿಯಾ ಅವರಿಗೆ ಸಲಹೆಯಿತ್ತರು. ಪೆರೆಟೊ ಅವರಿಗೆ ಮಹಾರಾಣಿಯಿಂದ ಆಹ್ವಾನವೂ ಹೋಯಿತು. ಪೆರೆಟೊ ಬಂದಮೇಲೆ ಮಹಾರಾಣಿಯವರು ದೇಶದ ಆರ್ಥಿಕ ತಜ್ಞರನ್ನೂ ಕರೆಸಿ ದೇಶದ ಆರ್ಥಿಕ ಸಂಕಷ್ಟಗಳ ಕುರಿತು ಪೆರೆಟೊ ಅವರೊಂದಿಗೆ ಚರ್ಚಿಸಿದರು. ಪ್ರತಿಕೂಲ ಪರಿಸ್ಥಿತಿಯಿಂದ ಹೊರಬರಲು, ಮತ್ತೆ ರಾಜ್ಯದ ಬೊಕ್ಕಸವು (Exchequer) ಮೊದಲಿನಂತೆಯೇ ಸಮೃದ್ಧಿ ಹೊಂದಲು ಸಾಧ್ಯವೇ ಎಂದು ಕೇಳಿದರು. ಆಗ ಇಟಲಿಯ ಆ ಆರ್ಥಿಕತಜ್ಞ ತುಸು ಕಾಲಾವಕಾಶ ಕೋರಿ, ವಸ್ತುಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು. ಬಳಿಕ ಇಂಗ್ಲೆಂಡ್‌ನ ಆರ್ಥಿಕ ಸಂಕಷ್ಟ ಪರಿಹರಿಸಲು ಈ ಕೆಳಗಿನ ಎರಡು ಅಂಶಗಳ ಸೂತ್ರವನ್ನು ಮಹಾರಾಣಿ ಮುಂದಿಟ್ಟರು.

ಮೊದಲಿಗೆ ಸಮಾಜದ ಎಲ್ಲ ವರ್ಗಗಳ ಮೇಲೆ ಸಮನಾದ ಕರಭಾರ ಹೇರಿದ್ದು ತಪ್ಪು. ಇದರಿಂದ ಬಡಮಧ್ಯಮ ವರ್ಗದ ಜನರು ಕೊಡುವ ಸಣ್ಣಮೊತ್ತದ ತೆರಿಗೆಯನ್ನಷ್ಟೇ ಸಿರಿವಂತರೂ ನೀಡುವಂತಾಗಿದೆ. ಆದರೆ ಸಿರಿವಂತರು ಉಳ್ಳವರು. ಇನ್ನೂ ಹೆಚ್ಚಿನ ಕರವನ್ನು ಭರಿಸಬಲ್ಲರು. ಆದ್ದರಿಂದ ಈ ಏಕರೂಪ ತೆರಿಗೆ ನೀತಿಯನ್ನು ಮೊದಲು ಹಿಂತೆಗೆದುಕೊಳ್ಳಿ. ಬಡಮಧ್ಯಮ ವರ್ಗದವರು ತಮ್ಮ ಆದಾಯಕ್ಕೆ ಅನುಗುಣವಾಗಿ ತೆರಿಗೆ ಸಂದಾಯ ಮಾಡುವಂತಹ ಹೊಸ ವ್ಯವಸ್ಥೆಯನ್ನು ರೂಪಿಸಬೇಕು. ಸಿರಿವಂತರು ಹೆಚ್ಚಿನ ತೆರಿಗೆ ನೀಡಲು ಶಕ್ತರು. ಅವರಿಗೆ ಇನ್ನಷ್ಟು ಅಧಿಕ ಕರ ವಿಧಿಸಬೇಕು. ಇದರಿಂದ ಅವರೂ ದೇಶ ಸೇವೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ವಾದವನ್ನು ಪೆರೆಟೊ ಮಂಡಿಸಿದರು.

ಇನ್ನು ಎರಡನೆಯದಾಗಿ ನಿಮ್ಮ ರಾಷ್ಟ್ರದಲ್ಲಿರುವ ಸಿರಿವಂತ, ಮಧ್ಯಮ ಮತ್ತು ಬಡವರ್ಗದ ಜನರನ್ನು ಗುರುತಿಸಿ ಶೇಕಡಾವಾರು ಪ್ರಮಾಣದಲ್ಲಿ ವಿಂಗಡಿಸಿರಿ. ನಂತರ ರಾಷ್ಟ್ರದಲ್ಲಿ ಶೇಕಡ 20ರಷ್ಟು ಪ್ರಮಾಣದಲ್ಲಿರುವ ಸಿರಿವಂತರೆಲ್ಲ ಕೂಡಿಕೊಂಡು ಶೇಕಡ 80ರಷ್ಟು ಕರ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಮತ್ತೆ ಶೇಕಡ 80ರಷ್ಟು ಪ್ರಮಾಣ ಇರುವ ಬಡ ಮಧ್ಯಮ ವರ್ಗದ ಜನರೆಲ್ಲರೂ ಸೇರಿ ಶೇಕಡ 20ರಷ್ಟು ಕರ ನೀಡುವಂತಾಗಬೇಕು. ಇದರಿಂದ ರಾಷ್ಟ್ರದ ಬೊಕ್ಕಸಕ್ಕೆ ಬೇಕಾದ ಶೇಕಡ ನೂರು ಪೌಂಡು ಸಂಗ್ರಹವಾಗುತ್ತದೆ. ಈ ರೀತಿ ಕರ ಸಂಗ್ರಹವನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿದಲ್ಲಿ ನೀವು ಆರ್ಥಿಕ ಸಂಕಷ್ಟಗಳಿಂದ ಪಾರಾಗುವುದಷ್ಟೆ ಅಲ್ಲ, ದೇಶವೂ ಸುಭಿಕ್ಷವಾಗುತ್ತದೆ ಮತ್ತು ಜನರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಎಂದು ಪೆರೆಟೊ ಸಲಹೆ ನೀಡಿದ್ದರು.

ಈ ಎಲ್ಲ ವಿಶ್ಲೇಷಣೆಯನ್ನು ಕುತೂಹಲ ಆಸಕ್ತಿಯಿಂದ ಆಲಿಸಿದ ಮಹಾರಾಣಿಯು ತಮ್ಮ ಮಂತ್ರಿಮಂಡಲದ ಸದಸ್ಯರು ಮತ್ತು ಆರ್ಥಿಕ ತಜ್ಞರಿಗೆ ಈ ಹೊಸ ತೆರಿಗೆ ನೀತಿಯನ್ನು ಜಾರಿಗೆ ತರಬೇಕು ಎಂದು ಆಜ್ಞೆಯಿತ್ತರು. ಅದೇ ವರ್ಷದಿಂದ ಪೆರೆಟೊ ಹೇಳಿದ 80:20 ಸೂತ್ರದ ಕರ ಸಂಗ್ರಹ ನೀತಿ ಜಾರಿಗೆ ಬಂತು. ಈ ಸೂತ್ರ ನಿಜಕ್ಕೂ ಇಂಗ್ಲೆಂಡ್‌ನ ಹಲವು ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿತು.

ಒಂದು ನೂರು ರೂಪಾಯಿ ತೆರಿಗೆ ಸಂಗ್ರಹ ಮಾಡಬೇಕೆಂದರೆ ಶ್ರೀಮಂತರು ಎಲ್ಲರೂ ಸೇರಿ ಎಂಬತ್ತು ರೂಪಾಯಿ ತೆರಿಗೆ ಕೊಡಬೇಕು. ಮತ್ತೆ ಇನ್ನುಳಿದ ಇಪ್ಪತ್ತು ರೂಪಾಯಿಯನ್ನು ಬಡ ಮಧ್ಯಮ ವರ್ಗದವರಿಂದ ಸಂಗ್ರಹಿಸಬೇಕು ಎನ್ನುವುದು ಈ ಸೂತ್ರ. ಹೀಗೆ ಸರ್ಕಾರದ ಬೊಕ್ಕಸಕ್ಕೆ ಅವಶ್ಯವಿರುವ ಒಟ್ಟು ನೂರು ರೂಪಾಯಿ ತೆರಿಗೆ ಎಲ್ಲ ವರ್ಗಗಳ ಜನರಿಂದ ಸಂಗ್ರಹವಾಗಬೇಕು ಎನ್ನುವುದು ಪೆರೆಟೊ ಅವರ ಲೆಕ್ಕಾಚಾರ.

ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಕೌಟಿಲ್ಯನ ಒಂದು ಮಾತನ್ನು ನಾವಿಲ್ಲಿ ನೆನೆಯಬೇಕು. ತೆರಿಗೆಯನ್ನು ಹೇಗೆ ಸಂಗ್ರಹ ಮಾಡಬೇಕೆಂದರೆ ದುಂಬಿಯು ಹೂವಿನಲ್ಲಿನ ಮಕರಂದ ಹೀರಿದಂತೆ ತೆರಿಗೆ ಆಕರಿಸಬೇಕು ಎಂಬುದೇ ಆತನ ಮಾತು. ಹೂವಿಗೆ ಒಂದಿನಿತೂ ನೋವು ಆಗದಂತೆ ದುಂಬಿ ಹೇಗೆ ಮಕರಂದವನ್ನು ಹೀರುವುದೋ ಹಾಗೆಯೇ ಪ್ರಜೆಗಳಿಗೂ ಈ ನೋವು ಆಗಬಾರದು ಎಂಬುದು ಕೌಟಿಲ್ಯನ ಇಂಗಿತ.

ಹೀಗೆ ಈ 80:20 ಸೂತ್ರವೇ ಇಟಲಿಯ ಅರ್ಥತಜ್ಞ ಪೆರೆಟೊ ಆರ್ಥಿಕ ಜಗತ್ತಿಗೆ ನೀಡಿದ ಅದ್ಭುತ ಮಂತ್ರವಾಗಿದೆ. ಇಪ್ಪತ್ತು ಹಾಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ಪ್ರಪಂಚದ ಎಲ್ಲ ಕಾರ್ಪೊರೇಟ್ ಸಮುದಾಯಗಳು, ವಾಣಿಜ್ಯ ಸಮೂಹಗಳೆಲ್ಲವೂ ಈ ಸೂತ್ರವನ್ನು ಆಧರಿಸಿಯೇ ತಮ್ಮ ವಹಿವಾಟನ್ನು ಯಶಸ್ವಿಯಾಗಿ ನಡೆಸಿವೆ. ಸಾಫ್ಟ್‌ವೇರ್, ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್, ಔಷಧಿ ಕಂಪನಿಗಳು ಹಾಗೂ ಸಾರ್ವಜನಿಕ ರಂಗದಲ್ಲಿರುವ ಉತ್ಪನ್ನಗಳ ಮಾರಾಟ ಕಂಪನಿಗಳು ಈ ಪೆರೆಟೊ ಸಮೀಕರಣವನ್ನು ಆಧರಿಸಿವೆ.

ತಾತ್ಪರ್ಯ ಇಷ್ಟೆ. ಎಲ್ಲ ಕಂಪನಿಗಳು ತಮ್ಮ ಶೇಕಡ 80ರಷ್ಟು ಉತ್ಪನ್ನಗಳನ್ನು ಮಾರಾಟ ಮಾಡಲು ತಮಗೆ ಅತ್ಯಂತ ನಿಷ್ಠರಾದ ಶೇಕಡ 20ರಷ್ಟು ಗ್ರಾಹಕರನ್ನು ಆಶ್ರಯಿಸುತ್ತವೆ. ಮತ್ತೆ ಇನ್ನುಳಿದ ಶೇಕಡ 20ರಷ್ಟು ವ್ಯಾಪಾರಕ್ಕೆ ಇತರ ಶೇ 80ರಷ್ಟು ಗ್ರಾಹಕರನ್ನು ಅಲವಂಬಿಸುತ್ತವೆ.

ಉದಾಹರಣೆಗೆ ಎಲೆಕ್ಟ್ರಾನಿಕ್ಸ್ ಮತ್ತು ಆಟೊಮೊಬೈಲ್ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರುವ ಜಪಾನ್, ತನ್ನ ಶೇ 80ರಷ್ಟು ಮಾರಾಟದ ಗುರಿ ಸಾಧಿಸಲು ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳನ್ನು ಅವಲಂಬಿಸುತ್ತದೆ.

ಉಳಿದ ಶೇಕಡ 20ರಷ್ಟು ಮಾರಾಟ ಇನ್ನಿತರ ದೇಶಗಳಲ್ಲಿ ಆಗುತ್ತದೆ. ಅಮೆರಿಕದಲ್ಲಿ ಇಂದಿಗೂ ಅತಿ ಹೆಚ್ಚು ಮಾರಾಟವಾಗುವ ಕಾರು ಫೋರ್ಡ್ ಅಲ್ಲ. ಜಪಾನಿನ ಟೊಯೊಟಾ ಮತ್ತು ಹೊಂಡಾ ಕಾರುಗಳು. ಅಮೆರಿಕದ ಜನ ಬಯಸುವುದು ಜಪಾನ್ ಕಾರುಗಳನ್ನು. ಎಲೆಕ್ಟ್ರಾನಿಕ್ಸ್ ರಂಗದಲ್ಲಿ ಇತ್ತೀಚೆಗೆ ಜಪಾನ್‌ ಕಂಪನಿಗಳಿಗಿಂತ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್, ಎಲ್‌ಜಿ ಮತ್ತು ಹ್ಯುಂಡೈ ಕಂಪನಿಗಳು ಮುಂಚೂಣಿಯಲ್ಲಿವೆ. ವಿಶ್ವದ ಶೇಕಡ 80 ಎಲೆಕ್ಟ್ರಾನಿಕ್‌ ಮಾರುಕಟ್ಟೆಯನ್ನು ಇವುಗಳು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ. ತಮ್ಮ ಇಡೀ ವ್ಯವಹಾರವನ್ನು ಈ ಬಲಶಾಲಿ ರಾಷ್ಟ್ರಗಳ ಮೇಲೆಯೇ ಅವುಗಳು ಕೇಂದ್ರೀಕರಿಸಿವೆ. ಏಕೆಂದರೆ, ವಹಿವಾಟಿನ ಸಿಂಹಪಾಲು (Lion's share) ಅಲ್ಲಿಂದಲೇ ಬರುತ್ತದೆ. ಇನ್ನು ಸಾಫ್ಟ್‌ವೇರ್ ಜಗತ್ತಿಗೆ ಬಂದರೆ ಜಗತ್ತಿನ ಶೇ 80ರಷ್ಟು ಅವಶ್ಯಕತೆಯನ್ನು ನಮ್ಮ ಭಾರತ ಪೂರೈಸುತ್ತದೆ!

ದುರದೃಷ್ಟವಶಾತ್ ಬಹು ಜನರಿಗೆ ಅಂದರೆ ಮಾರ್ಕೆಟಿಂಗ್ ಜಗತ್ತಿನಲ್ಲಿ ದಿನ ನಿತ್ಯ ವ್ಯವಹರಿಸುವರಿಗೂ ಇದು ಇಟಲಿಯ ವಿಲ್‌ಫ್ರೆಡ್ ಎಂಬ ಅರ್ಥಶಾಸ್ತ್ರಜ್ಞ ನೀಡಿದ ಸೂತ್ರ ಎಂದು ತಿಳಿಯದು! ಎಲ್ಲರೂ 80:20ರ ಸಮೀಕರಣ ಎಂದು ಹೇಳುತ್ತಾರೆ, ಅಷ್ಟೆ.

ಈಗ ನಾವು ಈ 80:20ರ ಸಮೀಕರಣ ನಮ್ಮ ಪ್ರಕೃತಿಯಲ್ಲಿ ಹೇಗೆ ಅಡಕವಾಗಿದೆ ಎಂಬುದನ್ನು ತಿಳಿಯೋಣ. ಪ್ರಕೃತಿಯ ರಚನೆಯನ್ನೇ ನೋಡಿ. ನಮ್ಮ ಭೂಮಿಯ ಮೇಲೆ ಸುಮಾರು ಶೇ 80ರಷ್ಟು ಭಾಗ ನೀರು ಇದೆ. ಮತ್ತೆ ಉಳಿದ ಭಾಗ ಭೂಮಿಯಿದೆ. ನಮ್ಮ ಶರೀರದ ರಚನೆಯೂ ಇದೇ ಸೂತ್ರವನ್ನು ಆಧರಿಸಿದೆ. ಮುಕ್ಕಾಲು ಭಾಗ ಅಸ್ಥಿ, ಮಜ್ಜೆ, ಮಾಂಸ. ಕಾಲು ಭಾಗ ನೀರಿನ ಪ್ರಮಾಣವಿದೆ. ಮಾನವ ಶರೀರದ ಶೇಕಡ 80ರಷ್ಟು ರೋಗಗಳು ಶೇಕಡ 20ರಷ್ಟು ನೀರಿನ ಕಾರಣದಿಂದ ಮತ್ತು ಮಾನಸಿಕ ಒತ್ತಡವನ್ನು ತಾಳಲಾಗದೆ ಬರುತ್ತವೆ. ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ ಆರು ತಾಸು ನಿದ್ದೆ ಬೇಕು. ಅಂದರೆ 24 ತಾಸುಗಳ ಕಾಲು ಭಾಗ. ಕನ್ನಡದಲ್ಲಿ ಒಂದು ಗಾದೆಯಿದೆ. ‘ಓದು ಒಕ್ಕಾಲು ಬರವಣಿಗೆ ಮುಕ್ಕಾಲು’ ಎಂದು. ಅರ್ಥ ಇಷ್ಟೆ: ಒಂದು ಸಾರಿ ಓದಿದರೆ ಸಾಲದು, ಮೂರು ಬಾರಿ ಬರೆದು ಅಭ್ಯಾಸ ಮಾಡಬೇಕು. ಅಂದರಷ್ಟೇ ವಿಷಯ ಸರಿಯಾಗಿ ಮನನವಾಗುತ್ತದೆ.

ಅಂತೂ ಈ 80:20ರ ಸೂತ್ರವನ್ನು ಜಗತ್ತಿಗೆ ನೀಡಿದ ಇಟಲಿಯ ಅರ್ಥಜ್ಞ ವಿಲ್‌ಫ್ರೆಡ್ ಇತ್ತೀಚೆಗೆ ಅವರಿಗೆ ನಾವೆಲ್ಲ ಕೃತಜ್ಞತೆ ಸಲ್ಲಿಸಬೇಕು. ಈ ಸೂತ್ರವನ್ನು ಅನ್ವಯಿಸಿ ಆರ್ಥಿಕ ಅಭಿವೃದ್ಧಿಗೆ ಹೊಸ ಹೊಸ ದಾರಿಗಳನ್ನೂ ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT