ಡೆಹ್ರಾಡೂನ್: ‘ದೇಶವು ಭವಿಷ್ಯದಲ್ಲಿ ಪೂರ್ಣಪ್ರಮಾಣದ ಯುದ್ಧಕ್ಕೆ ಸಜ್ಜಾಗಿರಬೇಕು. ಇದಕ್ಕೆ ಪೂರಕವಾಗಿ ವಿವಿಧ ಸೇನಾ ಪಡೆಗಳು ಮತ್ತು ಆಡಳಿತ ವ್ಯವಸ್ಥೆಯ ನಡುವೆ ಹೊಂದಾಣಿಕೆ ಇರಬೇಕು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಸ್ಸೂರಿಯ ಲಾಲ್ಬಹದ್ದೂರ್ ರಾಷ್ಟ್ರೀಯ ಆಡಳಿತ ತರಬೇತಿ ಸಂಸ್ಥೆ ಯಲ್ಲಿ ಸೋಮವಾರ ನಡೆದ, ‘28ನೇ ಜಂಟಿ ನಾಗರಿಕ –ಸೇನಾ ತರಬೇತಿ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಒಂದು ವೇಳೆ ಪ್ರಚೋದನೆ ಎದುರಾದರೆ ಭಾರತವು ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಬೇಕು. ಏಕೆಂದರೆ ಭಾರತವು ತನ್ನ ಶಸ್ತ್ರಾಸ್ತ್ರಗಳಿಂದಲ್ಲ, ಮುಖ್ಯವಾಗಿ ನೈತಿಕ ಬಲದಿಂದ ಹೋರಾಟ ನಡೆಸಲಿದೆ. ಈಚಿನ ದಿನಗಳಲ್ಲಿ ಸೈಬರ್ ಮತ್ತು ಪರೋಕ್ಷ ಯುದ್ಧದ ಬೆದರಿಕೆಗಳಿಂದಾಗಿ ಭದ್ರತೆಯ ಸವಾಲುಗಳು ಹೆಚ್ಚು ಸಂಕೀರ್ಣ ವಾಗುತ್ತಿವೆ ಎಂದು ಅವರು ಪ್ರತಿಪಾದಿಸಿದರು.
‘ನೆರೆ ರಾಷ್ಟ್ರಗಳ, ನೀವುಗಳು ಗಮನಿಸಿದಂತೆ ಮುಖ್ಯವಾಗಿ ಒಂದು ನೆರೆ ರಾಷ್ಟ್ರದ ಸಾಮರ್ಥ್ಯವನ್ನು ಆಧರಿಸಿ ಭಾರತವು ಪೂರ್ಣ ಪ್ರಮಾಣದಲ್ಲಿ ಯುದ್ಧಸ್ಥಿತಿ ಎದುರಿಸಲು ಸನ್ನದ್ಧರಾಗಿರುವುದು ಮುಖ್ಯ. ಸೇನಾಪಡೆಗಳು ಮತ್ತು ನಾಗರಿಕ ಆಡಳಿತ ವ್ಯವಸ್ಥೆಯ ನಡುವಣ ಹೊಂದಾಣಿಕೆಯಿಂದ ಮಾತ್ರ ಇದು ಸಾಧ್ಯವಾಗಲಿದೆ ಎಂದು ನಾನು ಆಶಿಸುತ್ತೇನೆ’ ಎಂದು ಹೇಳಿದರು.
ಉಕ್ರೇನ್ ಯುದ್ಧವನ್ನು ಉಲ್ಲೇ ಖಿಸಿದ ಅವರು, ಭದ್ರತಾ ಸವಾಲುಗಳು ಹೆಚ್ಚುತ್ತಿವೆ. ಸೈಬರ್ ದಾಳಿಗಳ ಮೂಲಕ ಇಂದು ಒಂದು ದೇಶದ ಆರ್ಥಿಕತೆ, ಬ್ಯಾಂಕಿಂಗ್ ಮತ್ತು ಚುನಾವಣಾಪ್ರಕ್ರಿಯೆಯನ್ನೇ ಅಸ್ತವ್ಯಸ್ತಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.