ಡೆಹರಾಡೂನ್: ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅರ್ಚಕರ ಒಂದು ಬಣ, ಇದು ಶತಮಾನಗಳ ಹಳೆಯ ಸಂಪ್ರದಾಯವನ್ನು ಹಾಳು ಮಾಡುತ್ತದೆ ಎಂದು ಹೇಳಿದೆ.
ಚಿನ್ನದ ಲೇಪನ ವಿರೋಧಿಸುತ್ತಿರುವ ಅರ್ಚಕರು, ಈ ಪ್ರಕ್ರಿಯೆಯಲ್ಲಿ ಕೊರೆಯುವದೊಡ್ಡ ಯಂತ್ರಗಳನ್ನು ಬಳಸುವುದರಿಂದ ದೇವಸ್ಥಾನದ ಗೋಡೆಗಳಿಗೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ಳಿಯ ಲೇಪನಗಳಿಂದ ಮುಚ್ಚಲ್ಪಟ್ಟಿದ್ದ ಪ್ರಸಿದ್ಧ ದೇವಾಲಯದ ನಾಲ್ಕು ಗೋಡೆಗಳನ್ನು ಈಗ ಚಿನ್ನದ ಲೇಪನಗಳೊಂದಿಗೆ ಬದಲಾಯಿಸಲು ತೆಗೆದು ಹಾಕಲಾಗಿದೆ.
ಮಹಾರಾಷ್ಟ್ರದ ಶಿವಭಕ್ತರೊಬ್ಬರು ಸ್ವಯಂಪ್ರೇರಣೆಯಿಂದಚಿನ್ನ ಅರ್ಪಣೆ ಮಾಡಿದ ನಂತರ ದೇವಾಲಯದ ಗೋಡೆಗಳಿಗೆ ಚಿನ್ನದ ಲೇಪನ ಮಾಡಲಾಗುತ್ತಿದೆ. ಭಕ್ತರ ಪ್ರಸ್ತಾವವನ್ನು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಅಂಗೀಕರಿಸಿದೆ.
‘ಗೋಡೆಗಳಿಗೆ ಚಿನ್ನದ ಲೇಪನ ಹಾನಿ ಮಾಡುತ್ತಿದೆ. ಇದಕ್ಕಾಗಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗಿದೆ. ಶತಮಾನಗಳ ಹಳೆಯ ಸಂಪ್ರದಾಯ ಹಾಳು ಮಾಡುವುದನ್ನು ಸಹಿಸಲು ಆಗುವುದಿಲ್ಲ’ ಎಂದು ಯಾತ್ರಾರ್ಥಿ ಸಂತೋಷ್ ತ್ರಿವೇದಿ ಹೇಳಿದರು.
ದೇವಸ್ಥಾನದ ಗರ್ಭಗುಡಿಯೊಳಗೆ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಕ್ಕೆ ಕೆಲ ಹಿರಿಯ ಅರ್ಚಕರು ಒಲವು ತೋರಿದ್ದರಿಂದ ಅರ್ಚಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ.