ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಭಾನುವಾರ ಪ್ರಯಾಗರಾಜ್ನಲ್ಲಿ ‘ನಿಷಾದ್’ (ಅಂಬಿಗ) ಸಮುದಾಯದ ಜನರನ್ನು ಭೇಟಿಯಾಗಿ, ‘ಬಿಜೆಪಿಗೆ ತಕ್ಕ ಪಾಠ ಕಲಿಸು’ವಂತೆ ಮನವಿ ಮಾಡಿಕೊಂಡರು.
ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ. ಉತ್ತರ ಪ್ರದೇಶದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿಷಾದ್ ಸಮುದಾಯದ ಮತಗಳು ನಿರ್ಣಾಯಕ ಎನಿಸಿವೆ.
ಯಮುನಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ ಪೊಲೀಸರಿಂದ ಥಳಿತಕ್ಕೊಳಗಾದ ಅಂಬಿಗರ ಕುಟುಂಬದವರನ್ನು ಇದೇ ವೇಳೆ ಅವರು ಭೇಟಿಯಾದರು.
‘ಪೊಲೀಸ್ ಕ್ರಮವು ನಾಚಿಕೆಗೇಡಿತನ ಸಂಗತಿ. ನೀವು ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದೀರಿ. ಆದರೆ, ಅವರು ನಿಮಗಾಗಿ ಏನನ್ನೂ ಮಾಡಲಿಲ್ಲ. ನೀವು ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.
‘ನಿಮಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ. ನೀವು ನಮಗೆ ಬೆಂಬಲ ನೀಡಿ ಎಂದು ಕೋರಿದ ಅವರು, ಬಿಜೆಪಿ ಕೈಗಾರಿಕೋದ್ಯಮಿಗಳ ಬಗ್ಗೆ ಮಾತ್ರವೇ ಕಾಳಜಿ ಹೊಂದಿದೆ‘ ಎಂದರು.