ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಪ್ರೇಮ್ ಸಾಗರ್ ಅಜೀಜ್ ಮಂಗಳವಾರ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ತೊರೆದು, ಇತ್ತೀಚೆಗೆ ಬಿಜೆಪಿಗೆ ಸೇರಿದ ತಮ್ಮ ಪಕ್ಷದ ಮಾಜಿ ಸಹೋದ್ಯೋಗಿ ದೇವೇಂದರ್ ಸಿಂಗ್ ರಾಣಾ ಅವರನ್ನು ಬೆಂಬಲಿಸಿದ್ದಾರೆ.
ಬನಿ ವಿಧಾನಸಭಾ ಕ್ಷೇತ್ರಕ್ಕೆ ಎನ್ಸಿಯ ಉಸ್ತುವಾರಿಯಾಗಿದ್ದ ಅಜೀಜ್ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
‘ನಾನು 45 ವರ್ಷಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದೆ. ದೇವೇಂದರ್ ಸಿಂಗ್ ರಾಣಾ ಅವರಿಂದಾಗಿ ಮಾತ್ರ ನ್ಯಾಷನಲ್ ಕಾನ್ಫರೆನ್ಸ್ ಸೇರಿದ್ದೆ. ಅವರು ಜಮ್ಮುವಿನ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಅವರ ಉದ್ದೇಶವನ್ನು ನಿಸ್ಸಂದೇಹವಾಗಿ ಬೆಂಬಲಿಸುತ್ತೇನೆ’ ಎಂದು ಅಜೀಜ್ ಹೇಳಿದ್ದಾರೆ.
‘ಈಗ ರಾಣಾ ಜಮ್ಮುವಿಗಾಗಿ ಎನ್ಸಿ ತೊರೆದಿದ್ದಾರೆ. ನಾನು ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ರಾಣಾಗೆ ನನ್ನ ಬೆಂಬಲ ನೀಡುವೆ’ ಎಂದು ಅವರು ಇಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಕಿರಿಯ ಸಹೋದರ ರಾಣಾ, ಮಾಜಿ ಸಚಿವ ಎಸ್.ಎಸ್. ಸ್ಲೇಥಿಯಾ ಅವರೊಂದಿಗೆ ಅ.10ರಂದು ಎನ್ಸಿ ತೊರೆದರು. ಇಬ್ಬರೂ ಮರುದಿನ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ರಾಣಾ ಎನ್ಸಿಯ ಪ್ರಾಂತೀಯ ಅಧ್ಯಕ್ಷರಾಗಿದ್ದರು.