ಪುದುಚೇರಿ: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪುದುಚೇರಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ವಿ. ನಾರಾಯಣ ಸಾಮಿ ಮಂಗಳವಾರ ಸಹಿ ಅಭಿಯಾನ ಆರಂಭಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸೆಕ್ಯುಲರ್ ಡೆಮಾಕ್ರಟಿಕ್ ಅಲಯನ್ಸ್ (ಎಸ್ಡಿಎ) ನೇತೃತ್ವದಲ್ಲಿ ಸಹಿ ಅಭಿಯಾನ ನಡೆಸಲಾಗುತ್ತಿದೆ. ಎಡಪಕ್ಷಗಳು ಸೇರಿದಂತೆ ಇತರ ಮಿತ್ರ ಪಕ್ಷಗಳ ಪ್ರತಿನಿಧಿಗಳು ಅಭಿಯಾನದಲ್ಲಿ ಹಾಜರಿದ್ದರು. ಆದರೆ, ಅಭಿಯಾನದಲ್ಲಿ ಡಿಎಂಕೆ ಪಕ್ಷದ ಪ್ರತಿನಿಧಿಗಳು ಗೈರು ಹಾಜರಾಗಿದ್ದರು.
ಶಾಸಕ ನಮಸ್ಸಿವಾಯಂ ಅವರ ರಾಜೀನಾಮೆಯಿಂದಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಎಸ್ಡಿಎ ಸಂಖ್ಯೆ 12ಕ್ಕೆ ಇಳಿದಿದೆ. ಸದ್ಯಕ್ಕೆ ಎಸ್ಡಿಎ ಡಿಎಂಕೆ ಪಕ್ಷದ ಮೂವರು ಬೆಂಬಲಿಗರ ಮೇಲೆ ಅವಲಂಬಿತವಾಗಿದೆ.