ಚಂಡೀಗಡ: ಆಶಾ ಕಾರ್ಯಕರ್ತೆಯರಿಗೆ ₹2,500 ಮಾಸಿಕ ನಿಗದಿತ ಭತ್ಯೆಯನ್ನು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಗುರುವಾರ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ನಿಗದಿತ ಭತ್ಯೆಯಲ್ಲಿ ₹800 ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸ್ವಕ್ಷೇತ್ರ ಚಮಕೌರ್ ಸಾಹಿಬ್ನಲ್ಲಿ ಚುನಾವಣೆ ರ್ಯಾಲಿಯಲ್ಲಿ ಸಂದರ್ಭ ಸಿಎಂ ಚನ್ನಿ ಮಹತ್ವದ ಎರಡು ಘೋಷಣೆಗಳನ್ನು ಮಾಡಿದ್ದು, ಇದಕ್ಕಾಗಿ ₹124.25 ಕೋಟಿ ಮೀಸಲಿರಿಸುವುದಾಗಿ ತಿಳಿಸಿದ್ದಾರೆ.
ಸುಮಾರು 22,000 ಆಶಾ ಕಾರ್ಯಕರ್ತೆಯರು ಫಲಾನುಭವಿಗಳಾಗಲಿದ್ದಾರೆ. ನಿಗದಿತ ಭತ್ಯೆ ಜೊತೆಗೆ ₹5 ಲಕ್ಷ ವರೆಗೆ ಉಚಿತ ಆರೋಗ್ಯ ವಿಮೆಯೂ ಸಿಗಲಿದೆ. ಹಾಗೆಯೇ, 42,500 ಮಧ್ಯಾಹ್ನ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ನಿಗದಿತ ಭತ್ಯೆ ₹2,200ರಿಂದ ₹3000ಕ್ಕೆ ಏರಿಕೆಯಾಗಲಿದೆ.
ಇತರ ಮಹಿಳಾ ಸರ್ಕಾರಿ ಉದ್ಯೋಗಿಗಳಂತೆ ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ಪೂರ್ಣ ಪ್ರಮಾಣದ ಮಾತೃತ್ವ ರಜೆ ನೀಡಲಾಗುವುದು. ನಿಗದಿತ ಭತ್ಯೆ ಹೆಚ್ಚಳವು ಜನವರಿ 1ರಿಂದ ಕಾರ್ಯರೂಪಕ್ಕೆ ಬರಲಿದೆ. ಈ ಹಿಂದೆ 10 ತಿಂಗಳು ನಿಗದಿತ ಭತ್ಯೆ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ವರ್ಷದ 12 ತಿಂಗಳೂ ನಿಗದಿತ ಭತ್ಯೆ ಸಿಗಲಿದೆ ಎಂದು ಸಿಎಂ ಚನ್ನಿ ತಿಳಿಸಿದ್ದಾರೆ.