ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯವು(ಇ.ಡಿ) ಬಂಧಿಸಿದೆ.
ಈ ಬೆಳವಣಿಗೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು, ಇದು ರಾಜಕೀಯ ಪ್ರೇರಿತ ಕೃತ್ಯವೆಂದು ಹರಿಹಾಯ್ದಿದೆ.
ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಇದು ರಾಜಕೀಯ ಪ್ರೇರಿತ ಬಂಧನ. ಚನ್ನಿ ಮೇಲೆ ಒತ್ತಡ ಹೇರಲು ಮಾಡಲಾಗಿದೆ’ ಎಂದು ಖಂಡಿಸಿದ್ದಾರೆ.
‘ಚನ್ನಿ ಅವರು ಪರಿಶಿಷ್ಟ ಜಾತಿಗೆ ಸೇರಿದ ಮುಖ್ಯಮಂತ್ರಿ. ಅವರ ನೈತಿಕತೆಯನ್ನು ಕುಗ್ಗಿಸಲು ಬಿಜೆಪಿ ಬಯಸಿದೆ’ ಎಂದು ಖರ್ಗೆ ಹೇಳಿದ್ದಾರೆ.
ಫೆ. 20ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬರಲಿದೆ.