ಬೆಂಗಳೂರು: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಸ್ಪಷ್ಟ ಬಹುಮತ ಸಿಗುವುದು ಖಚಿತವಾಗಿದೆ. ಇದೇ ವೇಳೆ ಅಖಾಲಿದಳಕ್ಕೆ ತೀವ್ರ ಹಿನ್ನೆಡೆಯಾಗಿದ್ದು ಸೋಲನ್ನು ಒಪ್ಪಿಕೊಂಡಿರುವುದಾಗಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪಂಜಾಬಿಗಳು ನೀಡಿದ ಆದೇಶವನ್ನು ಪೂರ್ಣ ಹೃದಯ ಹಾಗೂ ನಮ್ರತೆಯಿಂದ ಸ್ವೀಕರಿಸುತ್ತೇವೆ’ ಎಂದು ಹೇಳಿದ್ದಾರೆ.
ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿರುವ ಬಾದಲ್, ‘ಪಂಜಾಬಿಗಳ ಆಶೋತ್ತರಗಳಿಗೆ ಅನುಗುಣವಾಗಿ ಆಮ್ ಆದ್ಮಿ ಪಕ್ಷ ಮತ್ತು ಭಗವಂತ ಮಾನ್ ನಡೆದುಕೊಳ್ಳಲಿದ್ದಾರೆ ಎಂಬ ಭರವಸೆ ಇದೆ’ ಎಂದು ತಿಳಿಸಿದ್ದಾರೆ.