ನವದೆಹಲಿ: ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ‘ಕ್ರಿಯೆಗೆ ಸಂಬಂಧಿಸಿದ ಕರ್ಮದಿಂದ ಯಾರೊಬ್ಬರೂ ಪಾರಾಗಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಮಧ್ಯವರ್ತಿ’ಗೆ 1.1 ಮಿಲಿಯನ್ ಯೂರೊ (₹9.51 ಕೋಟಿ) ಪಾವತಿಸಲಾಗಿದೆ ವಿಮಾನಗಳ ತಯಾರಿಕಾ ಸಂಸ್ಥೆಯ ಹೇಳಿಕೆ ಕುರಿತು ಫ್ರಾನ್ಸ್ ಮಾಧ್ಯಮಗಳ ವರದಿ ಕುರಿತಂತೆ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಈ ಮೊದಲು ಆರೋಪವನ್ನು ನಿರಾಕರಿಸಿತ್ತು.
ಯುದ್ಧವಿಮಾನಗಳ ಖರೀದಿ ವಹಿವಾಟಿನಲ್ಲಿ ಕಮಿಷನ್ ಪಾವತಿಯಾಗಿದೆ ಎಂದು ರಾಹುಲ್ ಗಾಂಧಿ ಈ ಹಿಂದೆಯೂ ಪ್ರಬಲವಾಗಿ ಆರೋಪಿಸಿದ್ದು, ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿತ್ತು.
‘ಕರ್ಮ ಎಂಬುದು ಒಬ್ಬರ ಕ್ರಿಯೆಗೆ ಸಂಬಂಧಿಸಿದ ದಾಖಲೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗದು’ ಎಂದು ಅವರು ಟ್ವೀಟ್ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು.