ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಭಾರತೀಯ ಸಶಸ್ತ್ರ ಪಡೆಗೆ ಅವಮಾನವನ್ನುಂಟು ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಗಡಿಯಲ್ಲಿ ಭಾರತ-ಚೀನಾ ಸೇನೆಯನ್ನು ಹಿಂತೆಗೆಯುವುದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಗಂಭೀರ ಆರೋಪವನ್ನು ಹೊರಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ನಡ್ಡಾ, ಇದು ಕಾಂಗ್ರೆಸ್ ಸರ್ಕಸ್ನ ಹೊಸ ಆವೃತ್ತಿ ಮಾತ್ರವಾಗಿದೆ ಎಂದು ವ್ಯಂಗ್ಯ ಮಾಡಿದರು.
ಗಡಿಯಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ತನ್ನ ಭೂಪ್ರದೇಶ ಕಳೆದುಕೊಂಡಿದೆ ಎಂದು ಹೇಳುತ್ತಿರುವುದೇಕೆ? ಕಾಂಗ್ರೆಸ್-ಚೀನಾ ನಡುವಣ ತಿಳುವಳಿಕೆಯ ಭಾಗವೇ? ಇದು ನಮ್ಮ ಧೀರ ಯೋಧರಿಗೆ ಆಗುತ್ತಿರುವ ಅವಮಾನವಲ್ಲವೇ ಎಂದು ಪ್ರಶ್ನಿಸಿದರು.
ಸೇನೆಯನ್ನು ವಾಪಸ್ ತೆಗೆದುಕೊಳ್ಳುವ ಒಪ್ಪಂದದ ಭಾಗವಾಗಿ ಭಾರತವು ಒಂದಿಂಚು ನೆಲವನ್ನು ಬಿಟ್ಟುಕೊಟ್ಟಿಲ್ಲ. ಸಾವಿರಾರು ಕಿ.ಮೀ.ಗಳನ್ನು ಬಿಟ್ಟುಕೊಡುವ ಪಾಪವನ್ನು ಯಾರಾದರೂ ಮಾಡಿದರೆ ಅದು ಭ್ರಷ್ಟ ಹೇಡಿತನದ ಕುಟುಂಬವಾಗಿದ್ದು, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ದೇಶವನ್ನೇ ಒಡೆದಿದೆ ಎಂದು ನೆಹರೂ-ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಮೊದಲು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಇದು ಬೇರೆ ಏನೂ ಅಲ್ಲ. 100 ಪ್ರತಿಶತ ಹೇಡಿತನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಡಿಯಾಗಿದ್ದು, ಚೀನಾ ವಿರುದ್ಧ ನಿಲ್ಲುವ ಧೈರ್ಯವಿಲ್ಲ. ಯೋಧರ ಬಲಿದಾನಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.