ಮಾಸ್ಕೊ/ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿನ ಪ್ರಕ್ಷುಬ್ಧ ಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಚೀನಾರಕ್ಷಣಾ ಸಚಿವ ಜನರಲ್ ವೈ ಫೆಂಗ್ ನಡುವೆ ಮಾಸ್ಕೊದಲ್ಲಿ ಶುಕ್ರವಾರ ಮಾತುಕತೆ ನಡೆಯಿತು.
ವಾಸ್ತವ ಗಡಿರೇಖೆಯಲ್ಲಿ (ಎಲ್ಎಸಿ) ಪರಿಸ್ಥಿತಿ ಉದ್ವಿಗ್ನಗೊಂಡಿರುವಾಗಲೇ ಸಚಿವರ ಮಟ್ಟದ ಸಭೆ ನಡೆದಿರುವುದು ಇದೇ ಮೊದಲು.
ವೈ ಫೆಂಗ್ ಅವರೇ ಮಾತುಕತೆಗೆ ಮನವಿ ಮಾಡಿದ್ದರು. ಶಾಂಘೈ ಸಹಕಾರ ಸಂಘಟನೆಯ ಸಮಾವೇಶವು ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿದ್ದು, ರಾಜನಾಥ ಸಿಂಗ್ ಮತ್ತು ವೈ ಫೆಂಗ್ ಅವರು ಭಾಗವಹಿಸಿದ್ದ ಸಂದರ್ಭದಲ್ಲಿ ಈ ಮಾತುಕತೆ ನಡೆದಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಸಹ ಜನರಲ್ ವೈ ಫೆಂಗ್ ಅವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಮಾತುಕತೆ ನಡೆಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.