ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಮಾದರಿ ಒಳಗೊಂಡ, ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರ ಇಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆಯಿತು.
ಸ್ತಬ್ಧಚಿತ್ರದ ಬಹುಪಾಲು ಸ್ಥಳವನ್ನು ರಾಮಮಂದಿರದ ಮಾದರಿ ಆವರಿಸಿದ್ದರೆ, ಮುಂಭಾಗ ಮಹರ್ಷಿ ವಾಲ್ಮೀಕಿ ಕುಳಿತ ಭಂಗಿಯಲ್ಲಿರುವ ಎತ್ತರದ ಮೂರ್ತಿ ಇತ್ತು. ‘ಇದು, ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ ಬಿಂಬಿಸಲಿದೆ’ ಎಂದು ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ತಿಳಿಸಿದರು. ಸಂತರ ವೇಷದಲ್ಲಿದ್ದ ಹಲವರು, ಕರಕುಶಲ ಕಲಾವಿದರು ಇದ್ದರು.
ಬೆಂಗಳೂರು: ‘ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಜನರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ. ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು ಮತ್ತು ಆರೋಗ್ಯ ಮೂಲಸೌಕರ್ಯ ಹಾಗೂ ಪಿ.ಪಿ.ಇ. ಕಿಟ್, ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸಲು ಬಳಸಿಕೊಂಡಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶಿತ್ವ ‘ಆತ್ಮ ನಿರ್ಭರ್ ಭಾರತ್’ ಕಾರ್ಯಕ್ರಮದ ದಿಸೆಯಲ್ಲಿ ಉತ್ತಮ ಹೆಜ್ಜೆ’ ಎಂದು ಬಣ್ಣಿಸಿದರು.
‘ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಈ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. ಇದೊಂದು ಶತ್ರುವಿನ ವಿರುದ್ಧ ಪಡೆದ ಜಯವಾಗಿದೆ. 2020ರಲ್ಲಿ ಹಿಂದೆಂದೂ ಕಂಡರಿಯದ ಕೋವಿಡ್-19ರ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ, ನಾವು ನವ ಚೈತನ್ಯ ಮತ್ತು ಆಶೋತ್ತರದೊಂದಿಗೆ ಹೊಸ ವರ್ಷ 2021ಕ್ಕೆ ಹೆಜ್ಜೆ ಇರಿಸಿದ್ದೇವೆ’ ಎಂದೂ ವಾಲಾ ಹೇಳಿದರು.