ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ದೆಹಲಿಯ ಐಟಿಒ ರಸ್ತೆಯ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಸಾವನ್ನಪ್ಪಿದ 25 ವರ್ಷದ ಯುವಕನ ಕುಟುಂಬವು, ಘಟನೆಯ ಕುರಿತು ಎಸ್ಐಟಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕೋರಿ ಬುಧವಾರ ನ್ಯಾಯಾಲಯದ ಮೆಟ್ಟಿಲೇರಿದೆ.
ಘಟನೆಯಲ್ಲಿ ಮೃತಪಟ್ಟ ಯುವಕ ನವರೀತ್ ಸಿಂಗ್ ಅವರ ಅಜ್ಜ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿಯ ವಿಚಾರಣೆಯು ಗುರುವಾರ ನಡೆಯುವ ಸಾಧ್ಯತೆ ಇದೆ.
ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅನೇಕ ರೈತರು ಘಾಜಿಪುರ ಗಡಿಯಿಂದ ಬಳಸುದಾರಿಯಲ್ಲಿ ಬರುತ್ತಿದ್ದರು. ನವರೀತ್ ಸಿಂಗ್ ಕೂಡಾ ಇದೇ ದಾರಿಯಲ್ಲಿ ಬಂದರು. ದೆಹಲಿಯ ಐಟಿಒ ರಸ್ತೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.