ಚಂದ್ರಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿಚಾರ ತಾರಕಕ್ಕೇರಿದರೂ, ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯ 14 ವಿವಾದಿತ ಗ್ರಾಮಗಳಲ್ಲಿ ವಾಸಿಸುವ ಜನರು ಮಾತ್ರ ಯಾವುದೇ ತಕರಾರಿಲ್ಲದೆ ಎರಡೂ ರಾಜ್ಯಗಳು ಜಾರಿಗೊಳಿಸುವ ಯೋಜನೆಗಳ ಫಲಾನುಭವಿಗಳಾಗಿದ್ದಾರೆ.
ಈ 14 ಗ್ರಾಮಗಳೂ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜಿವಾಟಿ ತಾಲ್ಲೂಕಿನಲ್ಲಿವೆ (ಮಹಾರಾಷ್ಟ್ರದ ನಕ್ಷೆಯ ಪ್ರಕಾರ). ರಾಜಕೀಯ ಸ್ಥಾನಮಾನ, ಮೂಲಸೌಕರ್ಯ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಇಲ್ಲಿನ ಗ್ರಾಮಸ್ಥರು ಎರಡೂ ರಾಜ್ಯಗಳಿಂದಲೂ ಪಡೆಯುತ್ತಿದ್ದಾರೆ.
‘ಈ ಗ್ರಾಮಗಳು ತಮ್ಮ ಪ್ರದೇಶದಲ್ಲಿವೆ ಎಂದು ಹಿಂದೆ ಆಂಧ್ರಪ್ರದೇಶ ಮತ್ತು ಈಗ ತೆಲಂಗಾಣವು (ವಿಭಜನೆಯ ನಂತರ) ಪ್ರತಿಪಾದಿಸುತ್ತಿದೆ. ಈ ವಿವಾದವು ಇನ್ನೂ ಬಗೆಹರಿದಿಲ್ಲ’ ಎಂದು ಪರಮ್ದೊಳಿ ಗ್ರಾಮ ಪಂಚಾಯಿತಿಯ ಮಾಜಿ ಸರಪಂಚ ವಾಮನ ಪವಾರ್ ಹೇಳುತ್ತಾರೆ.
‘ನಾವು ಎರಡೂ ರಾಜ್ಯಗಳ ಯೋಜನೆಗಳ ಸದುಪಯೋಗ ಪಡೆಯುತ್ತಿದ್ದೇವೆ. 14 ಗ್ರಾಮಗಳಲ್ಲಿ 300ರಿಂದ 400 ಮಂದಿ ಕೃಷಿಕರಿದ್ದಾರೆ. ತಮ್ಮ ಕೃಷಿ ಭೂಮಿಗೆ ಪಟ್ಟಾ ನೀಡುವ ಸರ್ಕಾರದ ಜೊತೆಗಿರಲು ಅವರು ಬಯಸುತ್ತಾರೆ’ ಎಂದೂ ತಿಳಿಸಿದ್ದಾರೆ.