ಪಟ್ನಾ: ಎರಡು ದಿನಗಳ ಹಿಂದೆ ಗುರುಗ್ರಾಮದಲ್ಲಿ ಸಿಬಿಐ ದಾಳಿ ನಡೆಸಿದ್ದ ಮಾಲ್, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸೇರಿದ್ದು ಎಂದು ವರದಿ ಮಾಡಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಆರ್ಜೆಡಿ ಶುಕ್ರವಾರ ಎಚ್ಚರಿಸಿದೆ.
‘ಸಿಬಿಐ ದಾಳಿ ನಡೆಸಿದ ಮಾಲ್ ತೇಜಸ್ವಿ ಯಾದವ್ ಅವರಿಗೆ ಸಂಬಂಧಿಸಿದ್ದು ಎಂದು ಕೆಲ ಮಾಧ್ಯಮಗಳು ಆಧಾರರಹಿತ ವರದಿ ಪ್ರಸಾರ ಮಾಡಿವೆ. ಸಾಕ್ಷ್ಯಗಳನ್ನು ತೋರಿಸಿದ ನಂತರ ಅವು ಮೌನವಾಗಿವೆ. ಈ ರೀತಿ ಸುಳ್ಳು ವರದಿ ಮಾಡಿದ ಮಾಧ್ಯಮಗಳು 48 ಗಂಟೆಗಳ ಒಳಗಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವೆವು’ ಎಂದುರಾಜ್ಯಸಭಾ ಸಂಸದ ಮನೋಜ್ ಝಾ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ‘ಸಿಬಿಐ, ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೆಹಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಿಂದ ಕೆಲವೊಂದು ಕಾಗದ ಪತ್ರಗಳು ಹಾಗೂ ರಾಜಕೀಯ ಪ್ರೇರಿತ ದಾಳಿ ಸಂಬಂಧ ಸೂಚನೆಗಳನ್ನು ಪಡೆದಿದ್ದಾರೆ’ ಎಂದು ಆರೋಪಿಸಿದರು.