ಲಖನೌ: ಉತ್ತರಪ್ರದೇಶ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಸೋಮವಾರ 2021–22ನೇ ಸಾಲಿನ ₹5.50 ಲಕ್ಷ ಕೋಟಿ ಗಾತ್ರದ ರಾಜ್ಯ ಬಜೆಟ್ ಅನ್ನು ಮಂಡಿಸಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಈ ಬಾರಿಯ ಬಜೆಟ್ನಲ್ಲಿ ಹೊಸ ಯೋಜನೆಗಳಿಗೆ ₹27,598.40 ಕೋಟಿ ಮೀಸಲಿಡಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ರಾಜ್ಯದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಬಜೆಟ್ ಮಂಡಿಸಿದರು. ಈ ವರ್ಷದ ಬಜೆಟ್ನಲ್ಲಿ ಕಳೆದ ವರ್ಷಕ್ಕಿಂತ ₹37,410 ಕೋಟಿ ಹೆಚ್ಚು ಹಣ ಮೀಸಲಿಡಲಾಗಿದೆ.
‘ಆತ್ಮ ನಿರ್ಭರ’ಉತ್ತರ ಪ್ರದೇಶದ ನಿರ್ಮಾಣವೇ ಈ ಬಜೆಟ್ನ ಗುರಿಯಾಗಿದೆ. ರಾಜ್ಯದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಸುರೇಶ್ ಅವರು ತಿಳಿಸಿದರು.
ಸಚಿವ ಸುರೇಶ್ ಕುಮಾರ್ ಡಿಜಿಟಲ್ ಬಜೆಟ್ ಮಂಡಿಸಿದರು. ಇದು ಯೋಗಿ ಆದಿತ್ಯನಾಥ ಸರ್ಕಾರ ಮೊದಲ ಪೇಪರ್ ರಹಿತ ಬಜೆಟ್ ಆಗಿದೆ. ಅಲ್ಲದೆ ಇದು ಯೋಗಿ ಆದಿತ್ಯನಾಥ ಸರ್ಕಾರ ಮಂಡಿಸಿದ ಐದನೇ ಬಜೆಟ್ ಆಗಿದೆ.