ಮುಂಬೈ: ‘ಸಾಕಿ ನಾಕಾ ಪ್ರದೇಶದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗರಾಳೆ ಸೋಮವಾರ ಹೇಳಿದ್ದಾರೆ.
‘ಪ್ರಕರಣದ ಆರೋಪಿ, ಉತ್ತರ ಪ್ರದೇಶದ ಜೌನ್ಪುರ ಮೂಲದ ಮೋಹಿತ್ ಚೌಹಾಣ್ (45) ಅಪರಾಧ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಮಹಿಳೆಯ ಹತ್ಯೆ ಮಾಡಲು ಬಳಸಿದ ವಸ್ತುವನ್ನು ಸಹ ಪತ್ತೆ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು 15 ದಿನದೊಳಗೆ ಪೂರ್ಣಗೊಳಿಸಲಾಗುವುದು. ಒಂದು ತಿಂಗಳ ಅವಧಿಯಲ್ಲೇ ದೋಷಾರೋಪಪಟ್ಟಿ ಸಲ್ಲಿಸಲಾಗುವುದು’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.
ತನಿಖೆ ಕುರಿತು ವಿವರಿಸಿದ ಅವರು, ಆರೋಪಿಗಳ ತಪ್ಪೊಪ್ಪಿಗೆ, ಸಾಕ್ಷಿಗಳ ಹೇಳಿಕೆ ಮತ್ತು ಸಿಸಿ ಟಿವಿ ದೃಶ್ಯಗಳಂಥ ಡಿಜಿಟಲ್ ಪುರಾವೆಗಳ ಮೂಲಕ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಮತ್ತು ಪರಿಶಿಷ್ಟ ಜಾತಿಗಳ (ಎನ್ಸಿಎಸ್ಸಿ)ರಾಷ್ಟ್ರೀಯ ಆಯೋಗವು ಮುಂಬೈಗೆ ಭೇಟಿ ನೀಡಿದ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರವು ಸಂತ್ರಸ್ತೆಯ ಮೂವರು ಪುತ್ರಿಯರಿಗೆ ₹20 ಲಕ್ಷ ಪರಿಹಾರ ಘೋಷಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.