ಮುಂಬೈ: ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಆಪ್ತ ಸಂಜಯ್ ರಾವತ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡರು.
ನವೆಂಬರ್ನಲ್ಲಿ ಯಾತ್ರೆ ಮಹಾರಾಷ್ಟ್ರದ ಮೂಲಕ ಹಾದು ಹೋದ ವೇಳೆ ಯುವಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಭಾಗಿಯಾಗಿದ್ದರು.
ಯಾತ್ರೆಯ 125ನೇ ದಿನದಂದು ಕಥುವಾದಲ್ಲಿ ರಾಜ್ಯಸಭಾ ಸದಸ್ಯ ರಾವತ್ ಭಾಗಿಯಾಗಿ, ರಾಹುಲ್ ಗಾಂಧಿಯನ್ನು ಶ್ಲಾಘಿಸಿದರು.
‘ನಾನು ಶಿವಸೇನಾವನ್ನು ಪ್ರತಿನಿಧಿಸುತ್ತಿದ್ದೇನೆ. ದೇಶದ ವಾತಾವರಣ ಬದಲಾಗುತ್ತಿದೆ ಮತ್ತು ರಾಹುಲ್ ಗಾಂಧಿ ಅವರನ್ನು ಧ್ವನಿ ಎತ್ತುವ ನಾಯಕನಾಗಿ ನೋಡುತ್ತಿದ್ದೇನೆ’ ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದರು.
‘ಜಮ್ಮುವಿನಲ್ಲಿ ಸುಮಾರು 5 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಮಳೆ ನಡುವೆಯೂ ರಾವತ್ ಅವರು ರಾಹುಲ್ ಗಾಂಧಿ ಅವರೊಂದಿಗೆ 12 ಕಿ.ಮೀ ನಡೆದರು‘ ಎಂದು ಸಾಮ್ನಾ ಟ್ವೀಟ್ ಮಾಡಿದೆ.