ನವದೆಹಲಿ: ಮದುವೆಗಾಗಿ ಮತಾಂತರ ತಡೆಯಲು ಕೆಲ ರಾಜ್ಯ ಸರ್ಕಾರಗಳು ತಂದಿರುವ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಪ್ರತಿವಾದಿಗಳಾಗಿ ಸೇರಿಸುವುದಕ್ಕೆ ಸುಪ್ರೀಂ ಕೋರ್ಟ್, ಎನ್ಜಿಒಗೆ ಅನುಮತಿ ನೀಡಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು, ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆ ಜಮೀಯತ್ ಉಲೇಮಾ ಎ ಹಿಂದ್ಗೂ ಈ ಅರ್ಜಿಯಲ್ಲಿ ಪ್ರತಿವಾದಿಯಾಗಲು ಅನುಮತಿ ನೀಡಿದೆ.
ಅಂತರ್ ಧರ್ಮದ ವಿವಾಹದಿಂದಾಗುವ ಮತಾಂತರಗಳನ್ನು ತಡೆಯುವ ಉದ್ದೇಶದಿಂದ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಜಾರಿಗೆ ತರಲಾಗಿರುವ ಕಾನೂನುಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಜನವರಿ 6 ರಂದು ಒಪ್ಪಿಗೆ ಸೂಚಿಸಿತ್ತು.
ವಕೀಲ ವಿಶಾಲ್ ಠಾಕ್ರೆ ಮತ್ತು ಎನ್ಜಿಒ ಸದಸ್ಯರೊಬ್ಬರು ಸೇರಿದಂತೆ ಹಲವರು ಮತಾಂತರ ನಿಷೇಧ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.