ನವದೆಹಲಿ: ಕಬ್ಬಿಣದ ಅದಿರು ರಫ್ತು ಮೇಲಿನ ನಿರ್ಬಂಧವನ್ನು ತೆಗೆದುಹಾಕುವ ಬಗ್ಗೆ ಕರ್ನಾಟಕ ಸರ್ಕಾರವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿನ ಗಣಿಗಳಿಂದ ತೆಗೆದ ಅದಿರನ್ನು ರಫ್ತು ಮಾಡುವ ಕುರಿತಂತೆಗಣಿ ಗುತ್ತಿಗೆದಾರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನಿರ್ಬಂಧ ತೆರವು ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತಿಳಿಸುವಂತೆ ಸೂಚಿಸಿತು.
ಸರ್ಕಾರದ ನಿಲುವನ್ನು ತಿಳಿಸುವಂತೆ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಮೂವರು ಸದಸ್ಯರ ಪೀಠವು ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಖಿಲ್ ಗೋಯಲ್ ಅವರಿಗೆ ಸೂಚಿಸಿತು.
ಕರ್ನಾಟಕದ ಮೂರು ಜಿಲ್ಲೆಗಳಿಂದ ಅದಿರು ರಫ್ತು ಮೇಲೆ ಇರುವ ನಿರ್ಬಂಧವನ್ನು ತೆರವು ಮಾಡಲು ಕೇಂದ್ರ ಸರ್ಕಾರದ ಗಣಿ ಮತ್ತು ಉಕ್ಕು ಸಚಿವಾಲಯ ಹಾಗೂ ಸಿಇಸಿ ಬೇಡಿಕೆ ಇರಿಸಿದ್ದವು. ಆದರೆ, ಉಕ್ಕು ತಯಾರಕರ ಸಂಘವು ಇದನ್ನು ವಿರೋಧಿಸಿತ್ತು.