ನವದೆಹಲಿ: ಟಾಟಾ ಸನ್ಸ್ನ ಮುಖ್ಯಸ್ಥರ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ಪದಚ್ಯುತಗೊಳಿಸುವ ಟಾಟಾ ಸಮೂಹದ ನಿರ್ಧಾರವನ್ನು ಎತ್ತಿಹಿಡಿದ 2021ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಷಪೂರ್ಜಿ ಪಲ್ಲೋಂಜಿ (ಎಸ್ಪಿ) ಸಮೂಹದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠವು ಮಾರ್ಚ್ 2021ರ ತೀರ್ಪಿನಲ್ಲಿ ಸೈರಸ್ ಮಿಸ್ತ್ರಿ ವಿರುದ್ಧ ಮಾಡಿದ ಕೆಲವು ಟೀಕೆಗಳನ್ನು ಅಳಿಸಿ ಹಾಕಲು ಆದೇಶಿಸಿತು.
ಟಾಟಾ ಸಮೂಹದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಎಸ್ಪಿ ಸಮೂಹದ ಅರ್ಜಿಯಲ್ಲಿ ನೀಡಲಾದ ಕಾರಣಗಳಿಗಾಗಿ ನ್ಯಾಯಾಲಯವು ಒಂದು ಅಥವಾ ಕೆಲವು ವಾಕ್ಯಗಳನ್ನು ಅಳಿಸಲು ಅನುಮತಿ ನೀಡಬಹುದು ಎಂದು ಹೇಳಿದರು.
ಮಿಸ್ತ್ರಿ ಅವರು 2012ರಲ್ಲಿ ರತನ್ ಟಾಟಾ ಅವರ ನಂತರ ಟಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ನಾಲ್ಕು ವರ್ಷಗಳ ಬಳಿಕ ಅವರನ್ನು ಆ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು.