ನವದೆಹಲಿ: ಕಾಂಗ್ರೆಸ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ನಡುವಿನ 2008ರ ಒಪ್ಪಂದದ ಬಗ್ಗೆ ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ಹಿಂಪಡೆದು, ಹೈಕೋರ್ಟ್ನಲ್ಲಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠವು ಪಿಐಎಲ್ ಸಲ್ಲಿಸಿದ್ದ ಶಶಾಂಕ್ ಶೇಖರ್ ಮತ್ತು ಪತ್ರಕರ್ತ ಸವಿಯೊ ರೊಡ್ರಿಗಸ್ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರಿಗೆ ತಿಳಿಸಿದೆ.
‘ಮೊದಲನೇಯದಾಗಿ, ನೀವು ಬಯಸುತ್ತಿರುವ ಯಾವುದೇ ಆದೇಶವನ್ನು ಹೈಕೋರ್ಟ್ನಿಂದ ಪಡೆಯಬಹುದು. ಎರಡನೇಯದಾಗಿ, ಈ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ಸರಿಯಾದ ನ್ಯಾಯಾಲಯವಾಗಿದೆ. ಮೂರನೇಯದಾಗಿ, ಹೈಕೋರ್ಟ್ ನೀಡುವ ಆದೇಶದ ಪ್ರಯೋಜನ ಪಡೆಯಲೂ ನಮಗೆ ಅವಕಾಶ ಸಿಕ್ಕಂತಾಗುತ್ತದೆ,’ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ಪೀಠ ಅರ್ಜಿದಾರರಿಗೆ ತಿಳಿಸಿತು.
‘ಈ ದೇಶದ ರಾಜಕೀಯ ಪಕ್ಷವೊಂದು ಆ ದೇಶದ (ಚೀನಾದ) ಏಕೈಕ ರಾಜಕೀಯ ಪಕ್ಷವೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ,’ ಎಂದು ಅರ್ಜಿದಾರರ ಪರ ವಕೀಲ ಮಹೇಶ್ ಜೇಠ್ಮಲಾನಿ ಅವರು ಮೊದಲಿಗೆ ನ್ಯಾಯಪೀಠಕ್ಕೆ ತಿಳಿಸಿದರು.
‘ಇದರಲ್ಲಿ ಏನೋ ಇದೆ ಎಂದು ನಮಗೆ ಅನಿಸುತ್ತಿದೆ. ಇದನ್ನು ಏನೆಂದು ಕರೆಯುವುದು? ಕಾನೂನಿನಲ್ಲಿ ಹಿಂದೆಂದೂ ಕೇಳಿರದ, ಅಸಂಬಂಧವಿದು ಎಂದು ನಾವು ಭಾವಿಸುತ್ತೇವೆ. ಒಂದು ರಾಜಕೀಯ ಪಕ್ಷದೊಂದಿಗಿನ ಒಪ್ಪಂದದ ಮೂಲಕ ಚೀನಾ ಈ ದೇಶ ಪ್ರವೇಶಿಸಿದೆ, ಸರ್ಕಾರದ ಮೂಲಕ ಅಲ್ಲ ಎಂದು ನೀವು ಹೇಳುತ್ತಿದ್ದೀರಿ. ಒಂದು ರಾಜಕೀಯ ಪಕ್ಷವು ಅದು ಹೇಗೆ ಚೀನಾದ ಒಪ್ಪಂದವೊಂದರಲ್ಲಿ ಸೇರಿಕೊಳ್ಳಲು ಸಾಧ್ಯ?’ ಎಂದು ಪೀಠವು ಪ್ರಶ್ನೆ ಮಾಡಿತು.
ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ‘ಇದು ಅದೇ ರೀತಿಯ ಪ್ರಕರಣ,’ ಎಂದು ಒತ್ತಿ ಹೇಳಿದರು. ಆಗ ಪ್ರತಿಕ್ರಿಯಿಸಿದ ಪೀಠ, ‘ಈ ಅರ್ಜಿಯನ್ನು ಹಿಂತೆಗೆದುಕೊಂಡು ಹೊಸ ಅರ್ಜಿಯನ್ನು ಸಲ್ಲಿಸಲು ಪೀಠ ನಿಮಗೆ ಅವಕಾಶ ನೀಡುತ್ತದೆ. ನೀವು ಹೇಳುತ್ತಿರುವುದನ್ನು ನ್ಯಾಯಾಲಯ ಪರಿಶೀಲಿಸುತ್ತದೆ. ಒಂದು ವೇಳೆ ನೀವು ಹೇಳುತ್ತಿರುವುದರಲ್ಲಿ ತಪ್ಪು ಕಂಡು ಬಂದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು,’ ಎಂದು ಪೀಠ ಎಚ್ಚರಿಕೆ ನೀಡಿತು.
‘ಆರೋಪಗಳೇನಾದರೂ ನಿಜವೆಂದು ಬಹಿರಂಗಗೊಂಡರೆ ಅದು ‘ಎನ್ಐಎ ಕಾಯ್ದೆ’ ಮತ್ತು ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ಯ ಅಡಿಯಲ್ಲಿ ಬರಲಿದೆ. ಹಾಗಾಗಿ ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಇದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿದರೆ ಒಳಿತು,’ ಎಂದು ವಕೀಲ ಜೇಠ್ಮಲಾನಿ ಮನವಿ ಮಾಡಿದರು.
ಕಾಂಗ್ರೆಸ್ ಮತ್ತು ಚೀನಾದ ಕಮ್ಯುನಿಸ್ಟ್ ಪಾರ್ಟಿ ನಡುವೆ 2008ರಲ್ಲಿ ಒಪ್ಪಂದವಾಗಿದ್ದು, ಈ ಸಂಬಂಧ ಎನ್ಐಎ ತನಿಖೆಯಾಗಬೇಕೆಂದು ಲಡಾಖ್ನಲ್ಲಿ ಭಾರತ-ಚೀನಾ ಸೈನಿಕರ ಸಂಘರ್ಷ ನಡೆದ ನಂತರ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿದೆ.
‘ಚೀನಾದೊಂದಿಗೆ ಪ್ರತಿಕೂಲ ಸಂಬಂಧವನ್ನು ಹೊಂದಿದ್ದರೂ, ಕಾಂಗ್ರೆಸ್ ತನ್ನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ. ಅಲ್ಲದೆ, ಒಪ್ಪಂದದ ವಿವರಗಳನ್ನು ದೇಶದಿಂದ ಮುಚ್ಚಿಟ್ಟಿದೆ,’ ಎಂದು ಪಿಐಎಲ್ನಲ್ಲಿ ಆರೋಪಿಸಲಾಗಿದೆ.
ಮಾಹಿತಿ ವಿನಿಮಯ ಮತ್ತು ಸಹಕಾರಕ್ಕಾಗಿ ಕಾಂಗ್ರೆಸ್ 2008ರಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬೀಜಿಂಗ್ನಲ್ಲಿ ಉನ್ನತ ಮಟ್ಟದ ಒಪ್ಪಂದ ಮಾಡಿಕೊಂಡಿದೆ ಎಂಬುದು ಪ್ರಮುಖ ಆರೋಪವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.