ನವದೆಹಲಿ: ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರ ವಿರುದ್ಧ ಸಿಬಿಐ ತನಿಖೆಗಾಗಿ ಸಲ್ಲಿಸಿರುವ ಮನವಿಯ ವಿಚಾರಣೆ ಆಗುವವರೆಗೆ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಪರಮ್ ಬೀರ್ ಸಿಂಗ್ ಅವರ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠವು, ಸಿಂಗ್ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆ ಮತ್ತು ದೋಷಾರೋಪ ಪಟ್ಟಿ ಭರ್ತಿ ಮಾಡುವುದು ಸೇರಿದಂತೆ ಇತರ ಪ್ರಕ್ರಿಯೆಗಳಿಗೆ ಮಾರ್ಚ್ 9ರವರೆಗೆ ತಡೆ ನೀಡಿದೆ.
ಸಿಂಗ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ನಡೆಯುತ್ತಿರುವ ಕಾನೂನು ಜಗಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಇದನ್ನು ‘ಅವ್ಯವಸ್ಥೆಯ ಮತ್ತು ಅತ್ಯಂತ ದುರದೃಷ್ಟಕರ ಪರಿಸ್ಥಿತಿ’ ಎಂದೂ ವಿವರಿಸಿದೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧ ₹100 ಕೋಟಿ ಸುಲಿಗೆ ಆರೋಪ ಮಾಡಿದ ನಂತರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಮ್ ಬೀರ್ ಸಿಂಗ್ ಹುದ್ದೆಯಿಂದ ಅಮಾನತುಗೊಂಡಿದ್ದಾರೆ.