ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಮೇಯರ್ ಆಯ್ಕೆಯ ಚುನಾವಣೆಯನ್ನು ಶೀಘ್ರ ನಡೆಸಬೇಕೆಂದು ಕೋರಿ ಎಎಪಿಯ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಎಎಪಿ ಪರ ಹಾಜರಾಗಿದ್ದ ವಕೀಲರು ಕೋರಿದ್ದಾರೆ. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ಒಪ್ಪಿಗೆ ಸೂಚಿಸಿದೆ.
ಸೋಮವಾರ ನಡೆದಿದ್ದ ಸಭೆಯಲ್ಲಿಯೂ ಗದ್ದಲ ಉಂಟಾದ ಕಾರಣ ಮೇಯರ್ ಆಯ್ಕೆಗೆ ಚುನಾವಣೆ ನಡೆದಿರಲಿಲ್ಲ. ಚುನಾವಣೆ ನಡೆಯದಿರುವುದಕ್ಕೆ ಎಎಪಿ ಹಾಗೂ ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿವೆ.
ಮೇಯರ್ ಚುನಾವಣೆಯ ಸಂಬಂಧ ಶೆಲ್ಲಿ ಒಬೆರಾಯ್ ಅವರು ಈ ಹಿಂದೆಯೂ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಆದರೆ ಫೆಬ್ರುವರಿ 6ರಂದು ಚುನಾವಣೆ ನಿಗದಿಯಾಗಿದ್ದರಿಂದ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿತ್ತು.