ನವದೆಹಲಿ: ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಲಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿವಿಧಾನಿಕ ಪೀಠವು ತೀರ್ಪು ಪ್ರಕಟಿಸಲಿದೆ. ನಜೀರ್ ಅವರು ಜನವರಿ 4ರಂದು ನಿವೃತ್ತರಾಗುವರು.
ಸುಪ್ರೀಂ ಕೋರ್ಟ್ನ ಸೋಮವಾರದ ವೇಳಾಪಟ್ಟಿಯ ಪ್ರಕಾರ ಈ ವಿಷಯದಲ್ಲಿ ಎರಡು ಪ್ರತ್ಯೇಕ ತೀರ್ಪುಗಳು ಇರಲಿದ್ದು ಅವುಗಳನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ಪ್ರಕಟಿಸಲಿದ್ದಾರೆ.
2016ರಲ್ಲಿ ಸರ್ಕಾರವು ನೋಟು ಅಮಾನ್ಯೀಕರಣ ಮಾಡುವ ನಿರ್ಧಾರ ಕೈಗೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಡಿಸೆಂಬರ್ 7ರಂದು ಕೇಂದ್ರ ಸರ್ಕಾರ ಮತ್ತು ಆರ್ಬಿಐಗೆ ನಿರ್ದೇಶನ ನೀಡಿತ್ತು.