ರಾಯಪುರ: ಕೋವಿಡ್ ವ್ಯಾಪಕವಾಗುತ್ತಿರುವ ಕಾರಣ ಸದ್ಯಕ್ಕೆ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಛತ್ತೀಸಗಡ ಸರ್ಕಾರ ತಿಳಿಸಿದೆ. ಸರ್ಕಾರದ ಈ ನಿರ್ಣಯವನ್ನು ಅಲ್ಲಿನ ಪೋಷಕರು ಸ್ವಾಗತಿಸಿದ್ದಾರೆ.
ಅ.15ರ ಬಳಿಕ ಶಾಲೆಗಳನ್ನು ತೆರೆಯುವ ನಿರ್ಧಾರ ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು ಎಂದುಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶಾಲೆಗಳನ್ನು ಪುನರಾರಂಭಿಸದಿರಲು ಛತ್ತೀಸಗಡದ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷವನ್ನು ‘ಶೂನ್ಯ ವರ್ಷ’ ಎಂದು ಘೋಷಿಸಿ, 8 ತರಗತಿವರೆಗಿನ ಮಕ್ಕಳನ್ನು ಮುಂದಿನ ತರಗತಿಗೆ ಉತ್ತೀರ್ಣ ಮಾಡಬೇಕು ಎಂದು ಛತ್ತೀಸಗಡದ ಪೋಷಕರ ಸಂಘಟನೆ (ಸಿಪಿಎ) ಒತ್ತಾಯಿಸಿದೆ.
‘ಕೋವಿಡ್ನ ಈ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷೆಯೇ ಎಲ್ಲಾ ಪೋಷಕರ ಮೊದಲ ಆದ್ಯತೆ. ಈ ಸಮಯದಲ್ಲಿ ಅವರನ್ನು ಶಾಲೆಗೆ ಕಳುಹಿಸುವುದರಿಂದ ಮಕ್ಕಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ’ ಎಂದು ಸಿಪಿಎ ಅಧ್ಯಕ್ಷ ಕ್ರಿಸ್ಟೋಪರ್ ಪೌಲ್ ಹೇಳಿದ್ದಾರೆ.