ಇಟಾನಗರ (ಅರುಣಾಚಲ ಪ್ರದೇಶ): ಮೇ 28 ರಂದು ನಾಪತ್ತೆಯಾದ ಇಬ್ಬರು ಸೈನಿಕರ ಪತ್ತೆಗಾಗಿ ಭಾರತೀಯ ಸೇನೆಯು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ರಕ್ಷಣಾ ವಕ್ತಾರರು ಭಾನುವಾರ ತಿಳಿಸಿದ್ದಾರೆ.
ಮುಂಚೂಣಿ ನೆಲೆಯಲ್ಲಿ ನಿಯೋಜಿಸಲಾಗಿದ್ದ ನಾಯಕ್ ಪ್ರಕಾಶ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ ಅವರು ಆಕಸ್ಮಿಕವಾಗಿ ನದಿಗೆ ಬಿದ್ದಿರುವ ಬಗ್ಗೆ ಶಂಕೆ ಇದೆ ಎಂದು ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮರಿಂದರ್ ಸಿಂಗ್ ವಾಲಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈಮಾನಿಕ ವಿಚಕ್ಷಣ ದಳ ಮತ್ತು ಶ್ವಾನದಳಗಳ ವ್ಯಾಪಕ ಹುಡುಕಾಟದ ಹೊರತಾಗಿಯೂ ಅವರನ್ನು ಈವರೆಗೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಎರಡು ವಾರಗಳಿಂದಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ತನಿಖೆ ಆರಂಭಿಸಲಾಗಿದೆ. ಉತ್ತರಾಖಂಡದವರಾದ ಇಬ್ಬರು ಸೈನಿಕರ ಕುಟುಂಬಗಳಿಗೆ ಶೋಧ ಕಾರ್ಯದ ಕುರಿತು ಪ್ರತಿ ಹಂತದ ಮಾಹಿತಿ ನೀಡಲಾಗುತ್ತಿದೆ ಎಂದು ಸೇನೆ ಹೇಳಿದೆ.