ನವದೆಹಲಿ (ಪಿಟಿಐ): ‘ನಮ್ಮ ನೆರೆಹೊರೆಯ ರಾಷ್ಟ್ರಗಳ ಭದ್ರತಾ ಪರಿಸರವು ಉತ್ತಮವಾಗಿಲ್ಲ’ ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಮಂಗಳವಾರ ಹೇಳಿದ್ದಾರೆ.
ಭಾರತೀಯ ರಕ್ಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದೇಶವು ವಿವಿಧ ಬಗೆಯ ಬೆದರಿಕೆಗಳನ್ನು ಎದುರಿಸುತ್ತಿದೆ. ಹೈಬ್ರಿಡ್ ಯುದ್ಧದಂತಹ ವಿಭಿನ್ನ ಸವಾಲುಗಳು ನಮ್ಮ ಎದುರಿಗಿವೆ. ಈ ಬಗೆಯ ಯುದ್ಧ ಪ್ರಕಾರಗಳಿಗೆ ದೇಶವು ಸನ್ನದ್ಧವಾಗಬೇಕಿರುವುದು ಅತ್ಯಗತ್ಯ’ ಎಂದಿದ್ದಾರೆ.
‘ಉಕ್ರೇನ್ ಸಂಘರ್ಷದ ಪರಿಣಾಮವನ್ನು ಇಡೀ ಜಗತ್ತು ಅನುಭವಿಸುತ್ತಿದೆ. ವಿಶ್ವವು ಆರ್ಥಿಕ ಹಿಂಜರಿತದೆಡೆ ಮುಖಮಾಡಿದೆ. ಹಲವು ಸಣ್ಣ ರಾಷ್ಟ್ರಗಳು ಈಗಾಗಲೇ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯಿಂದ ನಲುಗಿಹೋಗಿವೆ. ಇಂತಹ ವಾತಾವರಣದಲ್ಲಿ ಭಾರತವು ಭಿನ್ನ ಹಾದಿಯಲ್ಲಿ ಮುಂದುವರಿದಿದೆ. ನಮ್ಮ ಆರ್ಥಿಕತೆಯಲ್ಲಿ ದೃಢವಾದ ಚೇತರಿಕೆ ಕಂಡುಬಂದಿದೆ’ ಎಂದು ಹೇಳಿದ್ದಾರೆ.