ಗುವಾಹಟಿ: ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ ಅಸ್ಸಾಂನ ಕಾಂಗ್ರೆಸ್ ಶಾಸಕ ಶೆರ್ಮನ್ ಅಲಿ ಅಹ್ಮದ್ ಅವರನ್ನು ‘ದೇಶದ್ರೋಹ’ ಪ್ರಕರಣದಡಿ ಪೊಲೀಸರು ದುರಾಂಗ್ನಲ್ಲಿ ಬಂಧಿಸಿದ್ದಾರೆ.
ಅಹ್ಮದ್ ಅವರನ್ನು ಶನಿವಾರ ಡಿಸ್ಪುರದ ಶಾಸಕರ ವಸತಿ ಗೃಹದಲ್ಲಿ ಬಂಧಿಸಿ, ವಿಚಾರಣೆಗಾಗಿ ಪನ್ಬಜಾರ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಅವರ ವಿರುದ್ಧ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ) ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ಯು) ಮತ್ತು ಬಿಜೆಪಿಯ ಯುವ ಘಟಕ ಬಿಜೆವೈಎಂ ಸೇರಿದಂತೆ ಹಲವು ಸಂಘಟನೆಗಳು ಶಾಸಕರ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ದೂರುಗಳನ್ನು ನೀಡಿದ್ದವು.
ರಾಜ್ಯದಲ್ಲಿ ಉಪಚುನಾವಣೆಗೆ ಮುಂಚಿತವಾಗಿ ‘ಕೋಮು ಪ್ರಚೋದಕ’ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅಸ್ಸಾಂ ರಾಜ್ಯದ ಕಾಂಗ್ರೆಸ್ ಘಟಕವೂ ಅಹ್ಮದ್ ಅವರಿಗೆ ನೋಟಿಸ್ ನೀಡಿದ್ದು, ಮೂರು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
1983ರಲ್ಲಿ ಅಸ್ಸಾಂ ಆಂದೋಲನದ ಸಮಯದಲ್ಲಿ ದರಾಂಗ್ ಜಿಲ್ಲೆಯ ಸಿಪಜರ್ ಪ್ರದೇಶದಲ್ಲಿ ಅತಿಕ್ರಮಣಕಾರರು ಎಂಟು ಜನರನ್ನು ಕೊಂದಿದ್ದರು ಎಂದು ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟದ ಕೆಲವು ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಾಗ ಅಹ್ಮದ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
‘1983ರ ಆಂದೋಲನದಲ್ಲಿ ಮೃತಪಟ್ಟ ಎಂಟು ಜನರು ಹುತಾತ್ಮರಲ್ಲ. ಅವರು ಕೊಲೆಗಾರರು. ಅವರು ಗುರುಕೋಟಿ ಬಳಿಯ ಸಿಪಜರ್ ಪ್ರದೇಶದ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಕೊಲ್ಲುವಲ್ಲಿ ತೊಡಗಿದ್ದರು. ಸ್ವರಕ್ಷಣೆ ಉದ್ದೇಶದಿಂದ ನಡೆದ ಪ್ರತಿದಾಳಿಯಲ್ಲಿ ಅವರು ಸತ್ತಿದ್ದಾರೆ’ ಎಂದು ಅಹ್ಮದ್ ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.