ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸರ್ಕಾರವು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆಲೋಚಿಸಿದೆ. ಈ ಮೂಲಕ ಶ್ರೀರಾಮನ ಹೆಸರಿನಲ್ಲಿ 2024ರ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಲು ಉದ್ದೇಶಿಸಿದೆ ಎಂದು ಶಿವಸೇನಾ ಸೋಮವಾರ ಆರೋಪಿಸಿದೆ.
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ‘ಇದು ನಮಗೆ ರಾಜಕೀಯ ವಿಷಯವಲ್ಲ. ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಲು ಶಿವಸೇನಾ ಅಡ್ಡಿಯನ್ನುಂಟು ಮಾಡಿತ್ತು. ಈಗ ರಾಮಮಂದಿರ ನಿರ್ಮಾಣಕ್ಕೆ ಜನರು ತಮ್ಮ ಇಚ್ಛೆಯಿಂದಲೂ ದಾನ ಮಾಡದಂತೆ ತಡೆಯುತ್ತಿದೆ’ ಎಂದು ದೂರಿದೆ.
‘ಸಾರ್ವಜನಿಕರ ಹಣದಲ್ಲಿ ರಾಮಮಂದಿರವನ್ನು ನಿರ್ಮಿಸುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಆದರೆ ಈಗ ರಾಮನ ಹೆಸರಿನಲ್ಲಿ ಚುನಾವಣೆಗಾಗಿ ಪ್ರಚಾರವನ್ನು ಮಾಡಲಾಗುತ್ತಿದೆ. ಎಲ್ಲಿವರೆಗೆ ರಾಜಕೀಯ ಪ್ರಚಾರಕ್ಕಾಗಿ ಶ್ರೀ ರಾಮನ ಹೆಸರನ್ನು ಬಳಸುತ್ತೀರಾ’ ಎಂದು ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಸಾರ್ವಜನಿಕರಿಂದ ಕೊಡುಗೆಯನ್ನು ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಕಳೆದ ವಾರ ಹೇಳಿದ್ದರು.