ಮುಂಬೈ: ‘ಕರಾಚಿ ಭಾರತದ ಅಂಗವಾಗಲಿದೆ ಎಂದು ಪ್ರತಿಪಾದಿಸುವ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಿ’ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರಿಗೆ ಸೋಮವಾರ ಸವಾಲೆಸೆದಿದ್ದಾರೆ.
‘ನಾವು ಅಖಂಡ ಭಾರತದ ಪರಿಕಲ್ಪನೆಯಲ್ಲಿ ವಿಶ್ವಾಸ ಇರಿಸಿಕೊಂಡವರು. ಕರಾಚಿ ಒಂದು ದಿನ ಭಾರತದ ಭಾಗವಾಗಲಿದೆ ಎಂಬ ನಂಬಿಕೆ ಪಕ್ಷಕ್ಕಿದೆ’ ಎಂದು ಫಡಣವೀಸ್ ಹೇಳಿದ್ದರು.
ಮುಂಬೈನಲ್ಲಿರುವ ‘ಕರಾಚಿ ಸ್ವೀಟ್ಸ್’ ಅಂಗಡಿಯ ಹೆಸರು ಬದಲಿಸಬೇಕು ಎಂದು ಶಿವಸೇನಾ ಕಾರ್ಯಕರ್ತರೊಬ್ಬರು ಅದರ ಮಾಲೀಕರಿಗೆ ಒತ್ತಾಯಿಸಿದ ಬಳಿಕ ಫಡಣವೀಸ್ ಈ ಹೇಳಿಕೆ ನೀಡಿದ್ದರು.
ಅಂಗಡಿಯ ಹೆಸರು ಬದಲಿಸಬೇಕೆಂಬುದು ಶಿವಸೇನೆಯ ಅಧಿಕೃತ ನಿಲುವು ಅಲ್ಲ ಎಂದು ರಾವುತ್ ಸ್ಪಷ್ಟಪಡಿಸಿದ್ದಾರೆ.
‘ಕರಾಚಿಯು ಭಾರತದ ಭಾಗವಾದರೆ ಪಕ್ಷವು ಅದನ್ನು ಸ್ವಾಗತಿಸಲಿದೆ’ ಎಂದೂ ಹೇಳಿದ್ದಾರೆ.
ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಿಲೀನಗೊಳಿಸಿ ಒಂದೇ ದೇಶವಾಗಿಸಲು ಬಿಜೆಪಿ ಬಯಸಿದರೆ, ತಮ್ಮ ಪಕ್ಷ ಸ್ವಾಗತಿಸುವುದಾಗಿ ಸಚಿವ ಹಾಗೂ ಎನ್ಸಿಪಿ ಮುಖಂಡ ನವಾಬ್ ಮಲೀಕ್ ಹೇಳಿದ್ದಾರೆ.