ನವದೆಹಲಿ: 2021 ರ ಮಧ್ಯೆದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ಚುನಾವಣಾ ಆಯೋಗವು ಹಿರಿಯ ಅಧಿಕಾರಿಗಳನ್ನು ತಮಿಳುನಾಡು ಮತ್ತು ಪುದುಚೇರಿಗೆ ಸೋಮವಾರ ಕಳುಹಿಸಲಿದೆ.
ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಉಮೇಶ್ ಸಿನ್ಹಾ ಅವರು ಸೋಮವಾರ ಮತ್ತು ಮಂಗಳವಾರ ತಮಿಳುನಾಡಿನಲ್ಲಿ ಇರಲಿದ್ದಾರೆ. ಬುಧವಾರ ಪುದುಚೇರಿಗೆ ತೆರಳಲಿದ್ದಾರೆ. ಈ ವೇಳೆ ಅವರು ಚುನಾವಣಾ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಕಳೆದ ವಾರ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಅವರು ಇದೇ ರೀತಿ ಚುನಾವಣಾ ಸಿದ್ಧತೆಗಳನ್ನು ನೋಡಿಕೊಳ್ಳಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.
ಮುಂದಿನ ವರ್ಷ ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ.