ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘350ಕ್ಕೂ ಹೆಚ್ಚು ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದ ಅವಧಿಯಲ್ಲಿ ಸುಮಾರು 600 ರೈತರು ಹುತಾತ್ಮರಾಗಿದ್ದಾರೆ. ನರೇಂದ್ರ ಮೋದಿಯವರೇ, ನಿಮ್ಮ ಸಚಿವರೊಬ್ಬರ ಮಗ ರೈತರ ಸಾವಿಗೆ ಕಾರಣವಾಗಿದ್ದರೂ ನೀವು ರೈತರ ಪರ ಕಾಳಜಿವಹಿಸಲಿಲ್ಲ. ನಿಮ್ಮ ಪಕ್ಷದ ನಾಯಕರು ರೈತರನ್ನು ಅವಮಾನಿಸಿದ್ದಾರೆ. ರೈತರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಗೂಂಡಾಗಳು, ದುಷ್ಕರ್ಮಿಗಳು ಎಂದೆಲ್ಲ ಕರೆದಿದ್ದಾರೆ. ನೀವೇ ಅವರನ್ನು ’ಆಂದೋಲನ ಜೀವಿ’ ಎಂದು ಬಣ್ಣಿಸಿದ್ದೀರಿ. ಲಾಠಿಯಿಂದ ಹೊಡೆಸಿದ್ದೀರಿ. ಅವರನ್ನು ಬಂಧಿಸುವಂತೆಯೂ ಮಾಡಿದ್ದೀರಿ’ ಎಂದು ಆರೋಪಿಸಿದ್ದಾರೆ.