ಅಗ್ನಿಪಥ ಯೋಜನೆಯಲ್ಲಿ ಅಗ್ನಿವೀರರಿಗೆ 2-3 ಆಯ್ಕೆಗಳಿವೆ. 4 ವರ್ಷಗಳ ಬಳಿಕ ವಾಯುಪಡೆಯ ಸೇವೆಗೆ ಮರು-ನೋಂದಣಿ ಮಾಡಿಕೊಳ್ಳಬಹುದು. ಆಗ ಅವರಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಯಸಿದರೆ ಮಾಡಬಹುದು ಅಥವಾ ಸ್ವಂತವಾಗಿ ಉದ್ಯಮವನ್ನು ಸ್ಥಾಪಿಸಲು ಬಯಸಿದರೆ ಅದನ್ನು ಮಾಡಬಹುದು. ಇಲ್ಲವೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ದೊರೆಯಲಿದೆ ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ. ಇದಕ್ಕೂ ಮುನ್ನ, ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವ ‘ಅಗ್ನಿವೀರ’ರಿಗೆ ರಕ್ಷಣಾ ಇಲಾಖೆಯಲ್ಲಿ ಶೇಕಡಾ 10ರಷ್ಟು ಉದ್ಯೋಗ ಮೀಸಲಿಡುವ ಪ್ರಸ್ತಾವವನ್ನು ಸಚಿವ ರಾಜನಾಥ ಸಿಂಗ್ ಅವರು ಅನುಮೋದಿಸಿದ್ದರು.