ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಕೇಂದ್ರ ಗೃಹ ಸಚಿವಾಲಯದ ಏಜೆಂಟ್: ಶಿವ ಸೇನಾ

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಕೇಂದ್ರ ಗೃಹ ಸಚಿವಾಲಯದ ‘ರಾಜಕೀಯ ಏಜೆಂಟ್’ ಎಂದು ಆಡಳಿತಾರೂಢ ಶಿವ ಸೇನಾ ಟೀಕಿಸಿದೆ.
ರಾಜ್ಯಪಾಲರ ಕೋಟಾದಲ್ಲಿ ವಿಧಾನ ಪರಿಷತ್ತಿಗೆ ನೇಮಕವಾಗಬೇಕಿರುವ 12 ಮಂದಿಯ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಆದರೂ ನೇಮಕ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಶಿವ ಸೇನಾವು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಓದಿ: ಪರಿಷತ್ಗೆ ನಾಮನಿರ್ದೇಶನ: ಗೃಹ ಸಚಿವ ಶಾ ಭೇಟಿ ಮಾಡಿದ ‘ಮಹಾ’ ರಾಜ್ಯಪಾಲ ಕೋಶ್ಯಾರಿ
ಎಂಟು ತಿಂಗಳ ಹಿಂದೆಯೇ ರಾಜ್ಯ ಸರ್ಕಾರವು 12 ಮಂದಿಯ ಹೆಸರನ್ನು ಶಿಫಾರಸು ಮಾಡಿದೆ. ಕಡತಕ್ಕೆ ಸಹಿ ಹಾಕಲು ಇನ್ನೆಷ್ಟು ಸಮಯ ಬೇಕು ಎಂಬುದನ್ನು ರಾಜಭವನವೇ ತಿಳಿಸಬೇಕು. 80ನೇ ವಯಸ್ಸಿನಲ್ಲಿ ಕೋಶ್ಯಾರಿ ಅವರು ಸಿಂಹಗಡ ಕೋಟೆಯನ್ನು (ಪುಣೆ) ಏರಿದಾಗ ಎಲ್ಲರೂ ಸಂತಸಪಟ್ಟಿದ್ದರು. ಆದರೆ ಅವರು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಕೋಟೆಯನ್ನು ಕೆಡವಲು ಯತ್ನಿಸುತ್ತಿದ್ದಾರೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಸೇನಾ ಉಲ್ಲೇಖಿಸಿದೆ.
ಪಟ್ಟಿ ಕಳುಹಿಸಿರುವ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಮತ್ತೆ ವಿಜ್ಞಾಪನಾ ಪತ್ರ ಕಳುಹಿಸಿರುವುದನ್ನು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಕೂಡ ಗಮನಿಸಿವೆ. ಆದರೆ, ಕೋಶ್ಯಾರಿ ಅವರಿಗೆ ವಯಸ್ಸಾಗಿರುವುದರಿಂದ ಅವರು ಮರೆತಿರಬಹುದು ಎಂದು ಸೇನಾ ವ್ಯಂಗ್ಯವಾಡಿದೆ.
ಓದಿ: ಪೆಗಾಸಸ್ ಗೂಢಚರ್ಯೆ ನಡೆಸಲು ಹಣ ನೀಡಿದ್ದು ಯಾರು: ಸಂಜಯ್ ರಾವುತ್
‘ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯದ ಏಜೆಂಟ್ ಆಗಿದ್ದಾರೆ. 12 ಮಂದಿಯ ಹೆಸರುಳ್ಳ ಕಡತ ವಿಲೇವಾರಿ ಮಾಡದ ಅವರ ಮನಸ್ಸು ಶುದ್ಧವಿಲ್ಲ. ಕಡತಕ್ಕೆ ಸಹಿ ಹಾಕದಿರಲು ‘ಮೇಲಿ’ನಿಂದ ಅವರಿಗೆ ಒತ್ತಡವಿದೆ’ ಎಂದು ಸೇನಾ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.