ಪುಣೆ/ಮುಂಬೈ (ಪಿಟಿಐ): ಉಭಯ ರಾಜ್ಯಗಳ ನಡುವಿನ ಗಡಿ ವಿವಾದದ ಹಿನ್ನೆಲೆಯಲ್ಲಿ ನಗರದಲ್ಲಿಯೂ ಪ್ರತಿಭಟನೆಗಳು ನಡೆದಿದ್ದು, ಸ್ವಾರ್ಗೇಟ್ ಪ್ರದೇಶದ ಸಮೀಪ ಶಿವಸೇನಾ (ಉದ್ಧವ್ ಠಾಕ್ರೆ) ಕಾರ್ಯಕರ್ತರುಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕನಿಷ್ಠ ಮೂರು ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದಾರೆ.
ಪ್ರತಿಭಟನಕಾರರು, ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಗಳ ಮೇಲೆ ಕಪ್ಪು ಬಣ್ಣ ಸಿಂಪಡಿಸಿ, ಅದರ ಮೇಲೆ ಕಿತ್ತಳೆ ಬಣ್ಣದಿಂದ ‘ಜೈ ಮಹಾರಾಷ್ಟ್ರ’ ಎಂಬ ಘೋಷಣೆಗಳನ್ನು ಬರೆದಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕೈದು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ: ‘ಮಹಾರಾಷ್ಟ್ರದಿಂದ ಕರ್ನಾಟಕವನ್ನು ಪ್ರವೇಶಿಸುವ ವಾಹನಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು 24 ಗಂಟೆಗಳ ಒಳಗಾಗಿ ತಡೆಯಬೇಕು. ಇಲ್ಲದಿದ್ದರೆ, ರಾಜ್ಯದ ಸಹನೆಯ ಕಟ್ಟೆಯೊಡೆಯಲಿದ್ದು, ಬೇರೆಯೇ ಸ್ವರೂಪ ಪಡೆಯಲಿದೆ’ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಮಂಗಳವಾರ ಎಚ್ಚರಿಸಿದ್ದಾರೆ.
‘ಗಡಿ ಭಾಗದಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಂಥ ಪರಿಸ್ಥಿತಿ ನಿರ್ಮಾಣವಾಗಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ’ ಎಂದೂ ಅವರು ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಅದಕ್ಕೆ ಕರ್ನಾಟಕ ಸರ್ಕಾರ ಹಾಗೂ ಕೇಂದ್ರವೇ ಹೊಣೆ’ ಎಂದರು.