ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪೊಲೀಸರು ಶ್ರದ್ಧಾ ದೇಹದ ಭಾಗಗಳಿಗಾಗಿ ಭಾನುವಾರ ಮತ್ತೆ ಹುಡುಕಾಟ ಪ್ರಾರಂಭಿಸಿದ್ದಾರೆ. ಛತ್ರಾಪುರ ಮತ್ತು ಮೆಹ್ರೌಲಿಯ ಅರಣ್ಯ ಪ್ರದೇಶದ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಮತ್ತು ಆತನ ಪ್ರೇಯಸಿ ಶ್ರದ್ಧಾ ವಾಲಕರ್ ಹತ್ಯೆಗೈದು ದೇಹವನ್ನು ಕತ್ತರಿಸಿ 35 ತುಂಡಗಳಾಗಿಸಿದ್ದ. ಮೆಹ್ರೌಲಿಯ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದರು. ಪೊಲೀಸರು ಮೆಹ್ರೌಲಿ ಮತ್ತು ಪೂನಾವಾಲಾ ಫ್ಯ್ಲಾಟ್ನಲ್ಲಿ ಶ್ರದ್ಧಾ ದೇಹದ ಉಳಿದ ಭಾಗ ಹಾಗೂ ಕೊಲೆಗೆ ಬಳಸಲಾದ ಶಸ್ತ್ರಗಳನ್ನು ವಶಕ್ಕೆ ಪಡೆಯಲು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಮಂಗಳವಾರದವರೆಗೆ ಪೂನಾವಾಲಾನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಮೂಲಗಳ ಪ್ರಕಾರ ಪೊಲೀಸರ ತಂಡ ಅಫ್ತಾಬ್ ಈ ಹಿಂದೆ ಕೆಲಸ ಮಾಡುತ್ತಿದ್ದ ಗುರುಗ್ರಾಮದ ಸುತ್ತಲೂ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಪ್ರತ್ಯೇಕ ತಂಡವೊಂದು ಫ್ಲ್ಯಾಟ್ಗೆ ಭೇಟಿ ನೀಡಿ ಕೊಲೆ ತನಿಖೆಗೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂನಾವಾಲಾ ಮಂಪರು ಪರೀಕ್ಷೆಗೆ ಅನುಮತಿ ಲಭಿಸಿದ್ದು ಪೊಲೀಸರು ಪರೀಕ್ಷೆ ನಡೆಸಲು ಸಿದ್ಧರಾಗಿದ್ದಾರೆ. ಸೋಮವಾರ ನಗರದ ಡಾ.ಬಾಬಾ ಸಾಹೇಬ್ ಅಂಬೆಡ್ಕರ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆ ನಡೆಯುವ ಸಾಧ್ಯತೆಯಿದೆ.
ಪೂನಾವಾಲಾ, ಶ್ರದ್ಧಾಳ ದೇಹವನ್ನು ಕತ್ತರಿಸಿ ವಿವಿಧೆಡೆ ಎಸೆಯುವ ಮೊದಲು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್ನಲ್ಲಿಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ಪತ್ತೆಗಾಗಿ ದೆಹಲಿ ಪೊಲೀಸರು ಮಹಾರಾಷ್ಟ್ರ, ಹರಿಯಾಣ ಮತ್ತು ಹಿಮಾಚಲಯ ಪ್ರದೇಶಗಳಿಗೂ ತಂಡವನ್ನು ಕಳುಹಿಸಿದ್ದಾರೆ.
ಅಧಿಕಾರಿಗಳ ಪ್ರಕಾರ ಪೂನಾವಾಲಾ ಮತ್ತು ವಾಲಕರ್ ಮುಂಬೈ ತ್ಯಜಿಸಿದ ಬಳಿಕ ಹಿಮಾಚಲ ಸೇರಿದಂತೆ ಹಲವೆಡೆ ಸುತ್ತಾಡಿದ್ದಾರೆ. ಆ ಪ್ರವಾಸಗಳಲ್ಲಿನ ಯಾವುದೇ ಬೆಳವಣಿಗೆಯು ಪೂನಾವಾಲಾ ತನ್ನ ಪ್ರೇಯಸಿಯನ್ನು ಕೊಲ್ಲಲು ಪ್ರಚೋದಿಸಿರಬಹುದೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.