ಚಂಡೀಗಡ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಹತ್ಯೆಯಾದ ವ್ಯಕ್ತಿ, ಸಾವಿಗೂ ಮುನ್ನ ಮಾತನಾಡಿದ್ದು ಎನ್ನಲಾದ ವಿಡಿಯೊದ ಸತ್ಯಾಸತ್ಯತೆ ಕುರಿತು ಹರಿಯಾಣದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಆರಂಭಿಸಿದೆ.
‘ನಿನ್ನೆಯಿಂದ ಈ ವಿಡಿಯೊ ಹರಿದಾಡುತ್ತಿದೆ. ತನಗೆ ಒಬ್ಬ ವ್ಯಕ್ತಿ ₹ 30 ಸಾವಿರ ನೀಡಿದ್ದ ಎಂಬುದಾಗಿ ಹತ್ಯೆಗೂ ಮುನ್ನ ಈ ವ್ಯಕ್ತಿ ತನ್ನನ್ನು ಸುತ್ತುವರಿದಿದ್ದ ಗುಂಪಿಗೆ ಹೇಳುತ್ತಿರುವುದು ಈ ವಿಡಿಯೊದಲ್ಲಿದೆ’ ಎಂದು ಸೋನಿಪತ್ನ ಎಎಸ್ಪಿ ಮಯಂಕ್ ಗುಪ್ತಾ ಗುರುವಾರ ಹೇಳಿದರು.
‘ಯಾವ ಉದ್ದೇಶಕ್ಕೆ ಹಣ ನೀಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಲವಂತದಿಂದಾಗಿ ಆತ ಈ ರೀತಿ ಹೇಳಿಕೆ ನೀಡಿದ್ದಾನೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ತನ್ನನ್ನು ಸುತ್ತುವರಿದಿದ್ದ ಗುಂಪಿಗೆ ಒಬ್ಬ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಆತ ಹೇಳುತ್ತಿರುವುದು ಈ ವಿಡಿಯೊದಲ್ಲಿದೆ’ ಎಂದು ಅವರು ತಿಳಿಸಿದರು.
ಪಂಜಾಬ್ನ ತರನ್ ತರನ್ ಜಿಲ್ಲೆಯ ಲಖ್ಬೀರ್ ಸಿಂಗ್ (35) ಅವರ ಮೃತದೇಹವು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಸಮೀಪದಲ್ಲಿ ಪೊಲೀಸರು ನಿರ್ಮಿಸಿದ್ದ ಮುಳ್ಳು ತಂತಿಗಳ ತಡೆಗೋಡೆಗೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಅ.15ರಂದು ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಈ ವರೆಗೆ ‘ನಿಹಾಂಗ್’ ಗುಂಪಿಗೆ ಸೇರಿದ ನಾಲ್ವರನ್ನು ಬಂಧಿಸಲಾಗಿದೆ.