ಜಮ್ಮು: ‘ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಪರಿಸ್ಥಿತಿ ಈಗ ಅತ್ಯುತ್ತಮವಾಗಿದೆ. ಮತ್ತಷ್ಟು ಸುಧಾರಿಸುತ್ತಿದೆ. ಅಲ್ಲಿನ ಸ್ಥಳೀಯ ಆಡಳಿತಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕಾರ್ಯ ನಿರ್ವಹಿಸುತ್ತಿದೆ’ ಎಂದು ಸಿಆರ್ಪಿಎಫ್ ಮಹಾನಿರ್ದೇಶಕ ಕುಲ್ದೀಪ್ ಸಿಂಗ್ ಹೇಳಿದರು.
ಸಿಆರ್ಪಿಎಫ್ ಸಂಸ್ಥಾಪನಾ ದಿನದ ಅಂಗವಾಗಿ ಇಲ್ಲಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಡಿಜಿ ಪರೇಡ್ನಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಂಬರುವ ಶನಿವಾರ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಸಿಆರ್ಪಿಎಫ್ನ 83ನೇ ಸಂಸ್ಥಾಪನ ದಿನಾಚರಣೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಸಂಸ್ಥಾಪನಾ ದಿನದ ವಾರ್ಷಿಕೋತ್ಸವ ಸಮಾರಂಭವನ್ನು ದೇಶದ ರಾಜಧಾನಿ ದೆಹಲಿಯಿಂದ ಹೊರಗೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.
‘2021–22ರಲ್ಲಿ162 ಭಯೋತ್ಪಾದಕರು ಹಾಗೂ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದ್ದು, 1,500 ಮಂದಿಯನ್ನು ಬಂಧಿಸಲಾಗಿದ್ದು, 750 ಮಂದಿ ಶರಣಾಗಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ 12 ಮಂದಿ ಭದ್ರತಾ ಪಡೆ ಸಿಬ್ಬಂದಿ ಜೀವ ಕಳೆದುಕೊಂಡಿದ್ದು, 169 ಮಂದಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದರು.